ರಾಯಚೂರು, ಸೆಪ್ಟೆಂಬರ್, 09: ಕಾಂಗ್ರೆಸ್ನಲ್ಲಿ ಎರಡ್ಮೂರು ತಿಂಗಳಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅದಲ್ಲದೇ ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿದ್ದ ಶಿವಾನಂದ ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧವೂ ಕಿಡಿಕಾರಿದರು.
ನಿಮಗೆ ಕ್ರಮವಾಗಿ 5 ಕೋಟಿ, 25 ಕೋಟಿ ರೂಪಾಯಿ ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಟ ಆಡುತ್ತಿದ್ದಾನೆ. ನಮ್ಮ ಮನಸ್ಥಿತಿ ಕಳೆಯಲು ಹಾಗೂ ಕಾರ್ಯಕರ್ತರ, ಮುಖಂಡ ಮನೋಸ್ಥೈರ್ಯ ಕುಗ್ಗಿಸಲು ಹೀಗೆ ಮಾಡ್ತಿದ್ದಾರೆ. ಅವರ ಕೈಯಲ್ಲಿ 135 ಸಮಾಧಾನ ಮಾಡುವುದಕ್ಕೆ ಆಗ್ತಿಲ್ಲ. ಎರಡು ಮೂರು ತಿಂಗಳಲ್ಲಿ ಅಲ್ಲಿಯೇ ಸ್ಫೋಟ ಆಗುತ್ತದೆ. ಇನ್ನು, ಬಿಜೆಪಿ ಅವರನ್ನು ಕರೆದುಕೊಂಡು ಹೋಗಿ ಟಿಕೆಟ್ ಕೊಡ್ತಾರಾ ಎಂದು ಲೇವಡಿ ಮಾಡಿದರು.
ಬೈಂದೂರು ಬಿಜೆಪಿ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋಗುವಾಗ ಎಲ್ಲರೂ ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಅಂತಲೇ ಹೇಳ್ತಾರೆ. ಆದರೆ, ಅವರ ಭವಿಷ್ಯವೇ ಮುಗಿದಿರುತ್ತದೆ. ಅಲ್ಲಿ ಹಾಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹಾಗಾಗಿ ಅಲ್ಲೇ ಬಿಜೆಪಿಗೆ ಭವಿಷ್ಯವಿದ್ದಾಗ ಇವರ ಭವಿಷ್ಯ ಹೇಗೆ ಇರಲ್ಲ. ಕಾರ್ಯಕರ್ತರು, ಬೆಂಬಲಿಗರ ಮೇಲೆ ವಿಶ್ವಾಸವಿಲ್ಲ. ಹಾಗಾಗಿ ಹೋಗಿರುತ್ತಾ ಎಂದರು.
2024ರ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ: ಮಂಡ್ಯದಲ್ಲಿ ಸುಮಲತಾಗೆ ಈಗ ಸಂಕಷ್ಟ?
ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿನ ಫಲಿತಾಂಶವೇ ಬೇರೆ. ಲೋಕಸಭೆಗೆ ಯಾರನ್ನು ಕಳುಹಿಸಬೇಕು, ಯಾರನ್ನು ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಗೊತ್ತಿದೆ. ಜನರಿಗೆ ಮೋದಿ ಬೇಕು ಎನ್ನುವ ಆಸೆಯಿದೆ. ಸದ್ಯ ಭದ್ರತೆ, ಆರ್ಥಿಕತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತ ಈಗ ಜಗತ್ತಿನ ಮೂರನೇ ಶಕ್ತಿಯಾಗಿ ಬೆಳೆದಿದೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತಿದೆ. ಇನ್ನು ಇಂಡಿಯಾ ಮೈತ್ರಿಕೂಟದಲ್ಲಿ ಸೋನಿಯಾ, ರಾಹುಲ್, ಲಾಲು ಜಾಮೀನಿನ ಮೇಲಿದ್ದು, ಎಲ್ಲರೂ ಜಾಮೀನು ಗಿರಾಕಿಗಳು ಎಂದು ಕುಟುಕಿದರು.
ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಅವರಿಂದ ಬಿಜೆಪಿ ಅಲ್ಲ. ನನ್ನಿಂದ ಲಿಂಗಾಯತರಿಗೆ ಒಳ್ಳೆದಾಯ್ತು ಅಂತಾರೆ ಹಾಗೇನು ಆಗಿಲ್ಲ. ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ನಾಲ್ಕೈದು ಸಚಿವ ಸ್ಥಾನ ಅನುಭವಿಸಿ ಹೋಗಿದ್ದಾರೆ. ಶೆಟ್ಟರ್ ಸಾಕಷ್ಟು ಹಣ ಮಾಡಿದ್ದು, ಅವರ ಭೂಹಗರಣದ ಬಗ್ಗೆ ಸದ್ಯದಲ್ಲೇ ಎಲ್ಲಾ ಬಯಲಿಗೆ ಬರುತ್ತವೆ ನೋಡ್ತೀರಿ ಎಂದು ಹೇಳಿದರು.
ರೈತರ ಆತ್ಮಹತ್ಯೆ ಬಗ್ಗೆ ಕಾಂಗ್ರೆಸ್ನವರು ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ವಿಜಯಪುರದ ಮಂತ್ರಿಯೊಬ್ಬರು 5 ಲಕ್ಷಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ. ನಾನು ಅವರಿಗೆ 5 ಕೋಟಿ ರೂಪಾಯಿ ಕೊಡುತ್ತೇನೆ ಅವರು ಆತ್ಮಹತ್ಯೆ ಮಾಡಿಕೊಳ್ತಾರಾ? ನೀನು ಆತ್ಮಹತ್ಯೆ ಮಾಡ್ಕೊತೀನಿ ಅಂದ್ರೆ 5 ಕೋಟಿ ರೂ. ಕೊಡುತ್ತೇನೆ, ಇನ್ನು ಡಿ.ಕೆ.ಶಿವಕುಮಾರ್ ಶ್ರೀಮಂತ ಇರೋದ್ರಿಂದ 25 ಕೋಟಿ ರೂಪಾಯಿ ಕೊಡುತ್ತೇನೆ ಅಂಯಾ ಅಂತ ಸವಾಲು ಹಾಕಿದರು.
ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ನವರಿಗೆ 135 ಸೀಟ್ ಬಂದಿದೆ ಅಂತಾ ಅಹಂಕಾರ ಬಂದಿದೆ. ಹೀಗಾಗಿ ರೈತರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. ಇಂದಿರಾ ಗಾಂಧಿ ಅಂತವರೆ ಸೋತು ಹೋದರು, ಇವರೆಲ್ಲಾ ಯಾವ ಲೆಕ್ಕ ಎಂದರು. ಹಾಗೆಯೆ ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಸವಾಲು ಹಾಕಿದರು. ಕಾಂಗ್ರೆಸ್ ಅಂದ್ರೆ ಯಾವಾಗಲೂ ಹಿಂದೂ ವಿರೋಧಿ. ನಾನು ಒಂದ್ ಮಾತು ಹೇಳುತ್ತೇನೆ. ನಮ್ಮ ಹಬ್ಬ ಹರಿ ದಿನಗಳ ಮೇಲೆ ಯಾರು ಯಾವ ನಿರ್ಬಂಧ ಹಾಕಿದರೂ ನಾವು ಕೇಳೋದಿಲ್ಲ ಎಂದರು.
ನಾವು ವಿಜಯಪುರದಲ್ಲಿ ಡಿಜೆನೂ ಹೊಡೀತಿವಿ. ರಾಮ ಮಂದಿರದ ಹಾಡೂ ಹಾಕ್ತೀವಿ. ಈಗಲ್ಲ ಹಿಂದಿನಿಂದಲೂ ನಾವು ಮಾಡ್ಕೊಂಡ್ ಬಂದ್ದೀವಿ. ಈಗಲೂ ನಾವು ಗಣಪತಿ ಕೂರಿಸಲು ಪೊಲೀಸ್ ಅನುಮತಿ ತೆಗೆದುಕೊಳ್ಳಲ್ಲ. ಎಷ್ಟು ಪ್ರಕರಣ ಹಾಕುತ್ತಾರೆ ಹಾಕಲಿ, ನಾವ್ಯಾಕ್ರೀ ಅನುಮತಿ ತಗೋಬೇಕು. ಗಣಪತಿ ಕೂಡಿಸುವುದಕ್ಕೆ ಇದು ಹಿಂದೂಸ್ತಾನ ಐತಿ, ಪಾಕಿಸ್ತಾನ ಅಲ್ಲ ಎಂದು ಗುಡುಗಿದರು.
ನಾವು ಡಿಜೆನೂ ಹಾಕುತ್ತೇವೆ, ಕುಣಿಯುತ್ತೇವೆ. ನಮಗೆ ಹೇಗೆ ಹಬ್ಬ ಮಾಡಬೇಕು ಅನಿಸುತ್ತೋ ಆ ರೀತಿ ಹಬ್ಬ ಮಾಡ್ತೀವಿ. ಅದು ನಮ್ಮ ಹಕ್ಕು ಇದೆ, ನಾವು ಹಬ್ಬ ಮಾಡ್ತೇವೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಏನ್ ಮಾಡುತ್ತದೆ ಅದನ್ನು ಎದುರಿದೋಕೆ ನಾವು ಸಿದ್ಧರಿದ್ದೇವೆ. ನೀವೇನೋ ಕಠಿಣ ಕಾನೂನು ತರ್ತೇವೆ ಅಂದ್ರೆ ನೀವು ಎಲ್ಲಾ ಧರ್ಮದವರಿಗೂ ತನ್ನಿ. ಆಗ ನಾವು ಒಪ್ಪುತ್ತೇವೆ ಎಂದರು.