Weather Update 16-09-2023: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಂದು ಬಲವಾದ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಇಲ್ಲಿನ ಜನರಿಗೆ ಆಹ್ಲಾದಕರ ವಾತಾವರಣವನ್ನು ನೀಡಿದೆ. ಹವಾಮಾನ ಏಜೆನ್ಸಿಗಳ ಪ್ರಕಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಚಲನೆ ಸಕ್ರಿಯವಾಗಿದ್ದು, ಉತ್ತಮ ಮಳೆಯಾಗುತ್ತಿದೆ.
ಇದಲ್ಲದೇ ಮಾನ್ಸೂನ್ ಟ್ರಫ್ ಕೂಡ ತನ್ನ ಯಥಾಸ್ಥಿತಿಯಿಂದ ದಕ್ಷಿಣದತ್ತ ಸಾಗುತ್ತಿದ್ದು, ಇದರಿಂದಾಗಿ ದೆಹಲಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ 5 ದಿನಗಳಲ್ಲಿ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರದ ಭಾರಿ ಮಳೆಯಿಂದಾಗಿ ಕನಿಷ್ಠ ತಾಪಮಾನವು 23.7 ಡಿಗ್ರಿ ಸೆಲ್ಸಿಯಸ್’ಗೆ ಇಳಿದಿದೆ, ಇದು ಈ ಋತುವಿನ ಸರಾಸರಿಗಿಂತ ಒಂದು ಡಿಗ್ರಿ ಕಡಿಮೆ ಎಂದು ಹೇಳಲಾಗುತ್ತಿದೆ.
ದೆಹಲಿಯ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯ ಕಾರಣದಿಂದ ಪ್ರದೇಶಗಳು ಜಲಾವೃತಗೊಂಡಿದ್ದು, ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಕ್ಷರಧಾಮ ಮಂದಿರ ಮೆಟ್ರೊ ನಿಲ್ದಾಣದ ಹೊರಗೆ ಮತ್ತು ವಿಕಾಸ್ ಮಾರ್ಗ್ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಪೂರ್ವ ಭಾರತ:
ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 18 ರಂದು ಒಡಿಶಾದ ಕೆಲವು ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಭಾರೀ ಮಳೆಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿಗಳು ಸೆಪ್ಟೆಂಬರ್ 16-18 ರ ಅವಧಿಯಲ್ಲಿ ಜಾರ್ಖಂಡ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚಾಲ್ತಿಯಲ್ಲಿರುತ್ತವೆ.
ಮಧ್ಯ ಭಾರತ:
ಸೆ.16-17ರಂದು ಮಧ್ಯಪ್ರದೇಶ, ವಿದರ್ಭ ಹಾಗೂ 1 ಛತ್ತೀಸ್’ಗಢದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ವಾಯುವ್ಯ ಭಾರತ:
ಸೆಪ್ಟೆಂಬರ್ 16 ರಂದು ಉತ್ತರಾಖಂಡದಲ್ಲಿ ಮತ್ತು ಸೆಪ್ಟೆಂಬರ್ 16-17 ರಂದು ಪೂರ್ವ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಪಶ್ಚಿಮ ಭಾರತ:
ಸೆಪ್ಟೆಂಬರ್ 16-18 ರ ಅವಧಿಯಲ್ಲಿ ಗೋವಾ, ಮಧ್ಯ ಮಹಾರಾಷ್ಟ್ರದ ಕೊಂಕಣ ಮತ್ತು ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿಗಳು ಸೆಪ್ಟೆಂಬರ್ 16-17 ರ ಅವಧಿಯಲ್ಲಿ ಮರಾಠವಾಡದಲ್ಲಿ, ಸೆಪ್ಟೆಂಬರ್ 16-18 ರ ಅವಧಿಯಲ್ಲಿ ಗುಜರಾತ್ ಪ್ರದೇಶದಲ್ಲಿ ಮತ್ತು ಸೆಪ್ಟೆಂಬರ್ 17 ಮತ್ತು 18 ರಂದು ಸೌರಾಷ್ಟ್ರದಲ್ಲಿ ಚಾಲ್ತಿಯಲ್ಲಿರುತ್ತವೆ.
ಹಿಮಾಚಲ ಪದೇಶದಲ್ಲಿ ಭಾರೀ ಮಳೆ:
ಇನ್ನು ಹಿಮಾಚಲ ಪ್ರದೇಶದ ಮಂಡಿ, ಬಿಲಾಸ್ಪುರ್, ಚಂಬಾ, ಕಂಗ್ರಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 21 ರವರೆಗೆ ಈ ಪ್ರದೇಶದಲ್ಲಿ ಮಳೆಯಾಗಲಿದ. ರಾಜ್ಯದ ಕೆಳ ಮತ್ತು ಮಧ್ಯಮ ಗುಡ್ಡಗಾಡು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಎತ್ತರದ ಪ್ರದೇಶಗಳಲ್ಲಿ ಸಾಧಾರಣ ಮಳೆ ಅಥವಾ ಹಿಮಪಾತದ ಸಾಧ್ಯತೆಯೂ ಇದೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ ವರ್ಷ ಮುಂಗಾರು ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 15 ರವರೆಗೆ 840.6 ಮಿಮೀ ಮಳೆಯಾಗಿದೆ, ಇದು ಸಾಮಾನ್ಯ ಮಳೆಗಿಂತ (689.6 ಮಿಮೀ) 22 ರಷ್ಟು ಹೆಚ್ಚು.
ಕರ್ನಾಟಕದಲ್ಲಿ ಹೇಗಿದೆ ಮಳೆ ಪ್ರಭಾವ:
ನೆರೆರಾಜ್ಯ ಕೇರಳದ ದಕ್ಷಿಣ ವಲಯದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.