ನವಜಾತ ಶಿಶುವನ್ನು ಹೊತ್ತುಕೊಂಡು ಊರಿಗೆ ತೆರಳಲಾಗದ ಬಾಣಂತಿ ಹಾಗೂ ಅವರ ಪೋಷಕರಿಗೆ ಪೊಲೀಸರು ಊರಿಗೆ ತಲುಪಲು ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಿತ್ತೂರಿನ ಮಹಿಳೆಯೊಬ್ಬರು ಹೆರಿಗೆಗೆಂದು ನಗರ ಸಿಟಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಹೆರಿಗೆಯಾಗಿ ಮೂರು ದಿನವಾದ ನಂತರ ಇಂದು ಕ್ಲಿನಿಕ್ ನವರು ಏಕಾಏಕಿ ಡಿಸ್ಚಾರ್ಜ್ ಮಾಡಿದ್ದಾರೆ. ಆದ್ರೆ ಲಾಕ್ಡೌನ್ ಆಗಿದ್ದರಿಂದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಾಳೆ ಡಿಸ್ಚಾರ್ಜ್ ಮಾಡುವಂತೆ ಮಹಿಳೆ ತಂದೆ ತಾಯಿ ಕೇಳಿಕೊಂಡಿದ್ದಾರೆ. ಆದ್ರೆ ಆಸ್ಪತ್ರೆಯವರು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ. ದಿಕ್ಕು ತೋಚದೆ ಕಂಗಾಲಾದ ಮಹಿಳೆ ತಂದೆ – ತಾಯಿ, ಬಾಣಂತಿ ಹಾಗೂ ಹಸುಗೂಸನ್ನು ಕರೆದುಕೊಂಡು ಹೊಸ ಬಸ್ ನಿಲ್ದಾಣ ಎದುರಿನ ಫುಟ್ಪಾತ್ ಮೇಲೆ ಕುಳಿತ್ತಿದ್ದರು . ಸಾರಿಗೆ ವ್ಯವಸ್ಥೆ ಇಲ್ಲದೆ ದಿಕ್ಕು ತೋಚದೆ ಕುಳಿತ್ತಿದ್ದ ಇವರನ್ನು ವಿಚಾರಿಸಿದ ಉತ್ತರ ಸಂಚಾರಿ ಠಾಣೆ ಸಬ್ಇನ್ಸ್ಪೆಕ್ಟರ್ ವಿ ಹೆಚ್ ಮುರಾಳ ಹಾಗೂ ಅವರ ಸಿಬ್ಬಂದಿ ಕಿತ್ತೂರಿಗೆ ಸಮೀಪದ ಬೇಲೂರು ಕಡೆ ಹೊರಟ್ಟಿದ್ದ ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿಯನ್ನು ತಡೆದು, ಅದರಲ್ಲಿ ಇವರನ್ನು ಹತ್ತಿಸಿ ಕಳುಹಿಸಿದ್ದಾರೆ. ಈ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಮಾನವೀಯತೆಗೆ ಮಹಿಳೆ ಹಾಗೂ ಅವರ ತಾಯಿ ಸಿಬ್ಬಂದಿ ಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬಾಣಂತಿ, ಹಸುಗೂಸನ್ನು ಸ್ವಗ್ರಾಮಕ್ಕೆ ತಲುಪಿಸಿದ ಪೊಲೀಸರು
Please follow and like us: