ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ನಾಮದೇವ್ ಡಾಂಗೆ ಇಂಡಿಯಲ್ಲಿ ಜ್ಯೂವೆಲರಿ ಶಾಪ್ ನಡೆಸುತ್ತಿದ್ದು 5 ಕೋಟಿ ಹಣ, ಅಥವಾ 3 ಕೆ.ಜಿ ಚಿನ್ನ ಕೊಡುವಂತೆ ಮಹಾದೇವ ಸಾಹುಕಾರ್ ಭೈರಗೊಂಡ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಮದೇವ್ ಡಾಂಗೆ ಆರೋಪಿಸಿ ದೂರು ನೀಡಿದ್ದಾರೆ. ಮಹಾದೇವ್ ಸಾಹುಕಾರ್ ಭೈರಗೊಂಡ ಹಾಗೂ ಸಹಚರರು ನಾಮದೇವ್ ಡಾಂಗೆಗೆ ಧಮ್ಕಿ ಹಾಕಿದ್ದರು. ಹಣ ಅಥವಾ ಚಿನ್ನ ಕೊಡದಿದ್ದರೆ ಮನೆಗೆ ಬಂದು ತಲೆಗೆ ಗುಂಡಿಕ್ಕುವದಾಗಿ ಬೆದರಿಕೆ ಹಾಕಿದ್ದರು ಎಂದು ಡಾಂಗೆ ದೂರು ನೀಡಿದ್ದಾರೆ. ಈ ಕುರಿತು ಚಡಚಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಹಾದೇವ್ ಸಾಹುಕಾರ್ ಸೇರಿ ಮೂವರ ವಿರುದ್ಧ ಐಪಿಸಿ ಸೆಕ್ಷನ್ 384, 511, 504, 506 ಅಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಮಹಾದೇವ್ ಸಾಹುಕಾರ್ ಭೈರಗೊಂಡ ಬಂಧನವಾಗಿದ್ದರೆ ಇನ್ನಿಬ್ಬರು ಸಹಚರರು ಪರಾರಿಯಾಗಿದ್ದಾರೆ. ಇನ್ನೂ ಇಷ್ಟು ದಿನ ಶಾಂತ ವಾಗಿದ್ದ ಭೀಮಾತೀರದಲ್ಲಿ ಮತ್ತೆ ಹಾವಳಿ ಶುರುವಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ ಪಿ ಅನುಪಮ ಅಗರವಾಲ ಅವ್ರು ಶುರು ಮಾಡಿದ್ದಾರೆ, ಕ್ಲೋಜ್ ನಾವು ಮಾಡ್ತಿವಿ ಎಂದು ಕಡಕ್ ಸಂದೇಶ ನೀಡಿದ್ದಾರೆ.