ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ ಎಂಬ ನೆಪದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸುಮಾರು 1500 ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗಿದೆ. ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರೂ ಸೇರಿದಂತೆ ಹಲವರು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. 30 ಹೆಚ್ಚು ಹಳ್ಳಿಗಳ ಕಾರ್ಮಿಕರು, ವ್ಯಾಪಾರಿಗಳು ಈ ಕಾರ್ಖಾನೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ ರಾಜ್ಯಸರ್ಕಾರವು ಇಲ್ಲಿ ವಿದ್ಯುತ್ ಖರೀದಿ ನಿಲ್ಲಿಸಿ, ಖಾಸಗಿಯವರಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ರಾಯಚೂರು ಶಾಖೊತ್ಪನ್ನ ವಿದ್ಯುತ್ ಕೇಂದ್ರದ ವಿದ್ಯುತ್ ಬೇಡಿಕೆ ಕಡಿಮೆಯಾಗಲು ಮತ್ತು ಕಾರ್ಮಿಕರು ಕೆಲಸ ಕಳೆದುಕೊಳ್ಳಲು ಕಾರಣ ಎಂಬ ಆರೋಪ ಕೇಳಿಬಂದಿದೆ.
3500 ಸರ್ಕಾರಿ ನೌಕರರು, 10000 ಕ್ಕೂ ಹೆಚ್ಚು ಗುತ್ತಿಗೆ ನೌಕರರು, 500ಕ್ಕೂ ಹೆಚ್ಚು ಅಪ್ರೆಂಟಿಸ್ ತರಬೇತಿದಾರರು ಕೆಲಸ ನಿರ್ವಹಿಸುತ್ತಿರುವ ಇಲ್ಲಿ ವಿದ್ಯುತ್ ಬೇಡಿಕೆಯಿಲ್ಲ ಎಂಬ ಕಾರಣದಿಂದ ಕೆಲ ಸಮಯ ಕೆಲಸ ಸ್ಥಗಿತಗೊಳಿಸಲು ಸೂಚಿಸಲಾಗಿದೆ.ಈ ಕುರಿತು ರಾಯಚೂರು ಗ್ರಾಮಾಂತರ ಶಾಸಕರಾದ ಬಸನಗೌಡ ದದ್ದಲ್ರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಸ್ಥಗಿತಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.