ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಈ ನಡುವೆ ನಮಗೆ ಸಂಪೂರ್ಣ ಬಹುಮತವಿದೆ. ಆದಷ್ಟು ಶೀಘ್ರ ನಾವು ಅಧಿವೇಶನ ಕರೆಯುತ್ತೇವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿಪ್ರಾಯ ಪಟ್ಟಿದ್ದಾರೆ. ನಮ್ಮೆಲ್ಲಾ ಕಾಂಗ್ರೆಸ್ ಶಾಸಕರು ಒಂದಾಗಿದ್ದೇವೆ. ಶೀಘ್ರ ಅಧಿವೇಶನ ಕರೆದು, ನಾವು ಬಹುಮತ ಸಾಬೀತು ಪಡಿಸಲಿದ್ದೇವೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ತಿರುಗಿ ನಿಂತ ನಂತರ ರಾಜಕೀಯ ಅಸ್ಥಿರತೆ ಎದುರಾಗಿತ್ತು.
ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಮಧ್ಯೆ ಸ್ಪೀಕರ್ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರಿಗೆ ಅನರ್ಹತೆಯ ನೋಟಿಸ್ ನೀಡಿದ್ದರು. ಈ ವಿಚಾರ ಈಗ ಕೋರ್ಟ್ ಮೆಟ್ಟಿಲೇರಿದೆ. ಸಚಿನ್ ಪೈಲಟ್ ಬೆಂಬಲಿತ ಶಾಸಕರು ಇಲ್ಲದ ಹೊರತಾಗಿಯೂ ವಿಶ್ವಾಸಮತ ಯಾಚನೆಗೆ ನಮಗೆ ಅಗತ್ಯವಾದ ಸಂಖ್ಯಾಬಲ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ಅಧಿವೇಶನ ಕರೆಯುತ್ತೇವೆ. ಅಧಿವೇಶನ ಕರೆದಾಗ ಭಿನ್ನಮತೀಯ ಶಾಸಕರೂ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಸಿಎಂ ಗೆಹ್ಲೋಟ್ ತಿಳಿಸಿದ್ದಾರೆ.