ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಳಗಾವಿಯಲ್ಲಿ ಸೈಬರ್ ವಂಚನೆ ಪ್ರಕರಣವು ಕಂಡುಬಂದಿದೆ. ಟೆಲಿಗ್ರಾಂ ಆಪ್ನ ಮೂಲಕ ಚಾಟಿಂಗ್ ಮಾಡಿಕೊಂಡು ಲಕ್ಷ ಲಕ್ಷ ವಂಚನೆ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಳಗಾವಿ ಸಿಇಎನ್ ಪೊಲೀಸರು ಭೇದಿಸಿದ್ದಾರೆ. ಹಣವನ್ನ ಡಬಲ್ ಮಾಡೋದಾಗಿ ಅಮಾಯಕರಿಂದ ಲಕ್ಷ ಲಕ್ಷ ಹಣವನ್ನು ಖದೀಮರು ದೋಚಿದ್ದಾರೆ. ಪ್ರತ್ಯೇಕ ಎರಡು ಪ್ರಕರಣದಲ್ಲಿ 46ಲಕ್ಷ 15ಸಾವಿರದ 906 ರೂಪಾಯಿ ವಂಚನೆ ಮಾಡಿದ್ದಾರೆ. ರಾಯಬಾಗದ ಶಿಲ್ಪಾ ಶಿರಗನಣ್ಣವರ ಹಾಗು ನಿಪ್ಪಾಣಿಯ ಆಶಾ ಕೋಟಿವಾಲೆ ಎಂಬುವವರು ಮೋಸ ಹೋದ ಮಹಿಳೆಯರಾಗಿದ್ದಾರೆ. ಒಬ್ಬರು ಬ್ಯಾಂಕ್ ಉದ್ಯಮಿಯಾಗಿದ್ದು, ಮತ್ತೊಬ್ಬರು ಡಾಕ್ಟರ್ ವೃತ್ತಿ ಮಾಡಿದ್ದ ಮಹಿಳೆಯಾಗಿದ್ದಾರೆ.
ಟೆಲಿಗ್ರಾಂ ಆಪ್ಅನ್ನೇ ಬಂಡವಾಳ ಮಾಡಿಕೊಂಡಿದ್ದಂತಹ ಖದೀಮರು ಅಮಾಯಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಮೊದಲಿಗೆ ಟೆಲಿಗ್ರಾಂ ಆಪ್ ಮೂಲಕ ಅನ್- ನೌನ್ ನಂಬರ್ಗಳಿಗೆ ಮೆಸೇಜ್ ಮಾಡಿ, ಆನ್ ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಚಾಟಿಂಗ್ ಮಾಡುತ್ತಾರೆ. ದಿನಕ್ಕೊಂದರಂತೆ ಬೇರೆ ಬೇರೆ ಟಾಸ್ಕ್ ನೀಡಿ ಹಾಕಿದ ಹಣಕ್ಕೆ ಡಬಲ್ ಹಣ ಕೊಡುತ್ತಾರೆ, ಕೆಲಸ ಮಾಡಿದಂತೆ ಹಣ ಡಬಲ್ ಮಾಡೋ ಆಮಿಷ ಒಡ್ಡುತ್ತಾರೆ. ಮೊದಲು ಎರಡ್ಮೂರ್ ಬಾರಿ ಮಹಿಳೆಯರು ಹಾಕಿದ ಹಣಕ್ಕೆ ವಂಚಕರು ಡಬಲ್ ಹಣವನ್ನು ನೀಡಿದ್ದರು. ಇನ್ವೆಸ್ಟ್ಮೆಂಟ್ ಮಾಡಿದ್ರೆ ಒಳ್ಳೆಯ ಹಣ ಬರುತ್ತೆ ಅಂತಾ ಮಹಿಳೆಯರನ್ನು ನಂಬಿಸಿದ್ದರು. ಹೀಗೆ ನಂಬಿಸಿ ಒಬ್ಬ ಮಹಿಳೆಯಿಂದ 27ಲಕ್ಷ ಮತ್ತೊಬ್ಬ ಮಹಿಳೆಯಿಂದ 18ಲಕ್ಷ ಹಣವನ್ನು ಲಪಟಾಯಿಸಿದ್ದಾರೆ. ಸುಮಾರು 21 ಬ್ಯಾಂಕ್ ಅಕೌಂಟ್ ಗಳಿಗೆ ಹಣ ಹಾಕಿದ್ದಂತಹ ಶಿಲ್ಪಾ ಹಾಗು ಆಶಾ ಮೋಸ ಹೋದ ಬಗ್ಗೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ಕಾರ್ಯಾಚರಣೆಯು
ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್.ಗಡೇಕರ್ ನೇತೃತ್ವದಲ್ಲಿ ನಡೆಯುತ್ತಿದ್ದು, ಖದೀಮರ 21 ಅಕೌಂಟ್ ಪ್ರೀಸ್ ಮಾಡಿ ಎಲ್ಲ ಹಣ ಮಹಿಳೆಯರಿಗೆ ವಾಪಸ್ ಮಾಡಿದ್ದಾರೆ. ಹಾಗು ಖದೀಮರ 21 ಅಕೌಂಟ್ ನಲ್ಲಿ 71ಲಕ್ಷ ಹಣವಿದ್ದು ಅದರ ಮೂಲವನ್ನು ಪೊಲೀಸರು ಕೆದಕುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಳಗಾವಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.