ಉದಯಪುರ (ರಾಜಸ್ಥಾನ): ಒಂದು ಕುಟುಂಬ, ಒಂದು ಟಿಕೆಟ್ ನಿಯಮ ಜಾರಿಗೆ ಬರಬೇಕು. ಪಕ್ಷದ ಮುಖಂಡರು ತಮ್ಮ ಆತ್ಮೀಯರು ಮತ್ತು ಕುಟುಂಬದ ಸಂಬಂಧಿಕರಿಗೆ ಟಿಕೆಟ್ ನೀಡುವಂತಿಲ್ಲ. ಒಂದು ವೇಳೆ ಟಿಕೆಟ್ ನೀಡುವುದಿದ್ದರೂ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಹೇಳಿದರು.
ಉದಯಪುರದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಯುತ್ತಿದ್ದು, ಅದರಲ್ಲಿ ಅವರು ಮಾತನಾಡುತ್ತಿದ್ದರು. ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮೂರು ದಿನಗಳ ಈ ಶಿಬಿರ ನಡೆಯಲಿದೆ. ಇದರಲ್ಲಿ ಹಲವಾರು ರಾಜ್ಯಗಳ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.
ಪಕ್ಷದಲ್ಲಿ ಐದು ವರ್ಷಕ್ಕಿಂತ ಹೆಚ್ಚುಕಾಲ ನಿರಂತರವಾಗಿ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಆ ಹುದ್ದೆಯಿಂದ ಕೆಳಗಿಳಿಯಬೇಕು. ಒಂದು ವೇಳೆ ಆ ಹುದ್ದೆಗೆ ಆ ವ್ಯಕ್ತಿ ಮರಳಿ ಬರಬೇಕು ಎಂದರೆ ಮೂರು ವರ್ಷಗಳ ಬಳಿಕವೇ ಬರಬೇಕು. ಭಾರತದ ಜನಸಂಖ್ಯೆಯ 60 ಪ್ರತಿಶತ 40 ಕ್ಕಿಂತ ಕಡಿಮೆ ಇರುವ ಕಾರಣ ಪಕ್ಷವು ಯುವಕರನ್ನು ಪ್ರತಿನಿಧಿಸಬೇಕಾಗಿದೆ, ಇದು ನಮ್ಮ ಎಲ್ಲಾ ಪಕ್ಷದ ಘಟಕಗಳು ಮತ್ತು ನಾವು ಹೊಂದಿರುವ ಹುದ್ದೆಗಳಲ್ಲಿ ಪ್ರತಿಫಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆಯಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಚುನಾವಣಾ ವೈಫಲ್ಯವನ್ನು ನಾವು ಮರೆಯಬಾರದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದು, ಇದೊಂದು ಉತ್ತಮ ಅವಕಾಶ ಆಗಿದೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, ಬಿಜೆಪಿಯು ಅಲ್ಪಸಂಖ್ಯಾತರ ವಿರೋಧಿ ನೀತಿ ಮೂಲಕ ಹೊತ್ತಿ ಉರಿಯುತ್ತಿರುವ ದ್ವೇಷದ ಬೆಂಕಿಯನ್ನು ಬಿತ್ತಲಾಗುತ್ತಿದೆ. ಇದು ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಇದು ಗಂಭೀರವಾದ ಸಾಮಾಜಿಕ ಪರಿಣಾಮಗಳನ್ನು ಉಂಟು ಮಾಡಿದ್ದು, ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚು ಗಂಭೀರವಾಗಿದೆ. ಜನರು ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕುವಂತೆ ಆಗಿದೆ. ಗಣರಾಜ್ಯದ ಸಮಾನ ನಾಗರಿಕರಾಗಿರುವ ಅಲ್ಪಸಂಖ್ಯಾತರನ್ನು ಬಲಿಪಶು ಮಾಡಲಾಗುತ್ತಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada