ಕಳೆದ ವರ್ಷ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ಹೈನೋದ್ಯಮ ನಂತರದಲ್ಲಿ ಉಲ್ಬಣಗೊಂಡಿದ್ದ ಚರ್ಮಗಂಟು ರೋಗ, ಕಾಲುಬೇನೆಯಿಂದ ಮತ್ತಷ್ಟು ತತ್ತರಿಸಿತ್ತು. ಇದೀಗ ಮತ್ತೆ ಬೇಸಿಗೆ ಆರಂಭದಲ್ಲೇ ಹಾಲಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಬೇಡಿಕೆಗೆ ತಕ್ಕಂತೆ ಹಾಲು ಪೂರೈಸಲಾಗದೆ ಹೈನೋದ್ಯಮ ಹೈರಾಣಾಗಿದೆ.
ರಾಜ್ಯಾದ್ಯಂತ 25 ಲಕ್ಷಕ್ಕೂ ಅಧಿಕ ಹೈನುಗಾರರಿದ್ದು, ಕೆಎಂಎಫ್ನ 15 ಒಕ್ಕೂಟ ಸೇರಿ 16 ಸಾವಿರ ಪ್ರಾಥಮಿಕ ಹಾಲು ಸಹಕಾರ ಸಂಘಗಳಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕಳೆದ 6 ತಿಂಗಳಿನಿಂದ ರಾಜ್ಯ 9500ಕ್ಕೂ ಅಧಿಕ ಗ್ರಾಮಗಳಲ್ಲಿ ಜಾನುವಾರುಗಳಿಗೆ ಜರ್ಮಗಂಟು ರೋಗ, ಕಾಲುಬೇನೆ ಉಲ್ಬಣಗೊಂಡಿದ್ದರಿಂದ ಹಾಲು ನೀಡುವ 10 ಸಾವಿರಕ್ಕೂ ಅಧಿಕ ಎಮ್ಮೆ-ಆಕಳುಗಳು ಅಕಾಲಿಕವಾಗಿ ಮೃತಪಟ್ಟಿವೆ.
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧಿಕಾರಿಗಳು ಹೇಳುವಂತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಹಾಲಿನ ಇಳುವರಿ ಕುಸಿದಿದ್ದು, ಒಕ್ಕೂಟಗಳಲ್ಲಿ ಹಾಲು ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಕೆಎಂಎಫ್ನ ಎಲ್ಲ ಒಕ್ಕೂಟಗಳಿಂದ ತಿಂಗಳಿಗೆ ಸಾಧಾರಣವಾಗಿ 95 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಜನವರಿ ತಿಂಗಳಲ್ಲಿ 8 ಲಕ್ಷ ಲೀಟರ್ ಹಾಗೂ ಇತರ ಒಕ್ಕೂಟಗಳ ಉತ್ಪಾದನೆಯೂ ಸೇರಿ ರಾಜ್ಯಾದ್ಯಂತ ಒಟ್ಟು 12 ಲಕ್ಷ ಲೀಟರ್ಗೂ ಅಧಿಕ ಹಾಲಿನ ಇಳುವರಿ ಕುಂಠಿತವಾಗಿದೆ. ಕೆಎಂಎಫ್ನಿಂದ ಹಸುವಿನ ಹಾಲಿಗೆ ಹೈನುಗಾರರಿಗೆ 30 ರೂ. ಹಾಗೂ ಸಂಘಗಳಿಗೆ 31.60 ರೂ.ದಂತೆ 1 ರೂ. ಹೆಚ್ಚಿಸಲಾಗಿದೆ. ಅಲ್ಲದೆ, ಎಮ್ಮೆಯ ಪ್ರತಿ ಲೀಟರ್ ಹಾಲಿಗೆ ಕ್ರಮವಾಗಿ 42.50 ರೂ. ಹಾಗೂ 44.50 ರೂ. ನೀಡುವ ಮೂಲಕ ಹೈನುಗಾರಿಕೆ ಪ್ರೋತ್ಸಾಹಿಸಲಾಗುತ್ತಿದೆ.
ಕೊಟ್ಟೆಗೆ ಬಿಟ್ಟು ಕದಲುತ್ತಿಲ್ಲ: ಕಾಲುಬೇನೆ ಹಾಗೂ ಚರ್ಮಗಂಟು ರೋಗಗಳ ಭೀತಿಯಿಂದ ರೈತರು ಹಾಗೂ ಹೈನುಗಾರರು ತಮ್ಮ ದನಕರುಗಳನ್ನು ತೋಟ, ಹೊಲ-ಗದ್ದೆ, ಗಾಯರಾಣ ಜಮೀನು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮೇಯಿಸಿಲು ಬಿಡುತ್ತಿಲ್ಲ. ದಿನವಿಡೀ ಕೊಟ್ಟಿಗೆಯಲ್ಲೇ ಕಟ್ಟಿ ಹಾಕುತ್ತಿರುವುದು ಹಾಗೂ ದಿನದಿಂದ ದಿನಕ್ಕೆ ಹಸಿ ಮೇವು ಕೊರತೆ ಹಾಗೂ ಹಿಂಡಿ ದರ ಹೆಚ್ಚಳವಾಗಿದ್ದರಿಂದ ಒಣಮೇವನ್ನೇ ಹಾಕಲಾಗುತ್ತಿದೆ. ಹೀಗಾಗಿ ಹಾಲಿನ ಇಳುವರಿ ಕುಂಠಿತಗೊಳ್ಳಲು ಕಾರಣವಾಗಿದೆ ಎನ್ನುತ್ತಿದ್ದಾರೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು.
ಚಿಕಿತ್ಸೆ, ಪರಿಹಾರ:ಪಶುಸಂಗೋಪಣೆ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಎಮ್ಮೆ, ಹಸು, ಎತ್ತು ಸೇರಿ ಒಟ್ಟು 73.50 ಲಕ್ಷ ಜಾನುವಾರುಗಳಿದ್ದವು. ಅವುಗಳಲ್ಲಿ 5.2 ಲಕ್ಷ ಜಾನುವಾರುಗಳು ಕಾಲುಬೇನೆ ಹಾಗೂ ಚರ್ಮಗಂಟು ರೋಗಕ್ಕೆ ತುತ್ತಾಗಿದ್ದವು. ಅವುಗಳ ಪೈಕಿ ಜನವರಿ ಅಂತ್ಯಕ್ಕೆ 35 ಸಾವಿರಕ್ಕೂ ಅಧಿಕ ರಾಸುಗಳು ಮೃತಪಟ್ಟಿದ್ದು, ಕರುವಿಗೆ 5 ಸಾವಿರ, ಹಸುವಿಗೆ 20 ಸಾವಿರ ಹಾಗೂ ಎತ್ತಿಗೆ 30 ಸಾವಿರ ರೂ.ಪರಿಹಾರ ನೀಡಲಾಗುತ್ತಿದ್ದು, ರೋಗ ಬಾಧಿತ ರಾಸುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಹಾಲಿನ ಪುಡಿ ಪೂರೈಕೆ ವ್ಯತ್ಯಯ:ಹಾಲಿನ ಇಳುವರಿ ಕಡಿಮೆಯಾಗುತ್ತದಂತೆಯೇ ಹಾಲಿನ ಉಪ ಉತ್ಪನ್ನಗಳ ಉತ್ಪಾದನೆಯೂ ಕುಂಠಿತಗೊಂಡಿದೆ. ಹೀಗಾಗಿ ಮಜ್ಜಿಗೆ, ಮೊಸರು, ತುಪ್ಪ ಸೇರಿ ವಿವಿಧ ಸಿಹಿ ಖಾದ್ಯ ಹಾಗೂ ಹಾಲಿನ ಪುಡಿ ಉತ್ಪಾದನೆಯೂ ಶೇ.20 ಕುಸಿದಿದೆ. ಪರಿಣಾಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಕ್ಷೀರಭಾಗ್ಯಕ್ಕೂ ಹಾಲಿನ ಪುಡಿ ಕೊರತೆ ಎದುರಾಗಿದ್ದು, ಪೂರೈಕೆ ವ್ಯತ್ಯಯದಿಂದ ರಾಜ್ಯದ ಶೇ.60 ಶಾಲೆಗಳಲ್ಲಿ ಮಕ್ಕಳಿಗೆ ಕೆನೆ ಭರಿತ ಹಾಲು ನೀಡುವುದು ಸ್ಥಗಿತಗೊಂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada