ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ಶಂಕರ್ ನಾಗ್ ಹೆಸರಿನಲ್ಲಿ ಸರಕಾರ ಸಾಕಷ್ಟು ಕೆಲಸ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಅದರಲ್ಲೂ ಮೆಟ್ರೋ ನಿಲ್ದಾಣಗಳಿಗೆ ಅವರ ಹೆಸರು ಇಡಬೇಕು, ಶಂಕರ್ ಕನಸಿನ ನಂದಿಬೆಟ್ಟದಲ್ಲಿಯ ರೋಪ್ ವೇ ಚಾಲನೆ ಕೊಡಬೇಕು ಮತ್ತು ಅದಕ್ಕೆ ಶಂಕರ್ ನಾಗ್ ಅವರ ಹೆಸರನ್ನೇ ಇಡಬೇಕು ಎನ್ನುವುದು ಆಗ್ರಹವಾಗಿತ್ತು.
ಕೊನೆಗೂ ಅದು ಹಾಗೆಯೇ ಉಳಿದುಕೊಂಡಿದೆ.
ಆದರೆ ಈ ಬಾರಿಯ ಬಜೆಟ್ ನಲ್ಲಿ ಸರಕಾರವು ಶಂಕರ್ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ಅದನ್ನು ಆಯವ್ಯಯ 2023-24ರಲ್ಲಿ ಸೇರಿಸಲಾಗಿದೆ. ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಇರುವ ಬಹುತೇಕ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣಗಳಿಗೆ ಶಂಕರ್ ನಾಗ್ ಅವರ ಹೆಸರೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಶಂಕರ್ ನಾಗ್ ಆಟೋ ಅಥವಾ ಟ್ಯಾಕ್ಸಿ ನಿಲ್ದಾಣಗಳನ್ನು ನೋಡಬಹುದು. ಇದೀಗ ಬಜೆಟ್ ನಲ್ಲೂ ಇಂಥದ್ದೊಂದು ಯೋಜನೆಯನ್ನು ಘೋಷಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಆಗಬೇಕು ಎನ್ನುವುದು ಶಂಕರ್ ನಾಗ್ ಅವರ ಕನಸಾಗಿತ್ತು. ಅದೀಗ ನನಸಾಗಿದೆ. ನಂದಿಬೆಟ್ಟದಲ್ಲಿ ರೂಪ್ ವೇ ಕೂಡ ಶಂಕರ್ ಕನಸು. ಇಂತಹ ದೊಡ್ಡ ಯೋಜನೆಗಳಿಗೆ ಶಂಕರ್ ನಾಗ್ ಹೆಸರನ್ನು ಇಡಲಿ ಎನ್ನುವುದು ಅವರ ಅಭಿಮಾನಿಗಳ ಆಗ್ರಹವಾಗಿತ್ತು. ಆದರೆ, ಬಜೆಟ್ ನಲ್ಲಿ ಇದ್ಯಾವುದೂ ಘೋಷಣೆಯಾಗಲಿಲ್ಲ ಎಂಬ ಬೇಸರ ಕೂಡ ಅವರ ಅಭಿಮಾನಿಗಳದ್ದಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada