ಬಿಜೆಪಿ ಸರ್ಕಾರ ಚಿಲುಮೆ ಸಂಸ್ಥೆ ಮೂಲಕ ಮತದಾರರ ಪಟ್ಟಿ ಅಕ್ರಮ ಮಾಡಿದ ನಂತರ ಈಗ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಬೇರೆ ರೀತಿಯ ಅಕ್ರಮಕ್ಕೆ ಮುಂದಾಗಿದೆ. ಈ ಕುರಿತು ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಶಾಸಕಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದ 46ನೆ ವಿಧಾನ ಸಭಾ ಕ್ಷೇತ್ರವಾಗಿರುವ ಆಳಂದದಲ್ಲಿ ಆನ್ಲೈನ್ ಮೂಲಕ 6,670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೇ ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಅರ್ಜಿ ಹಾಕಲಾಗಿದೆ ಎಂದರು.ಮತದಾರರ ಗಮನಕ್ಕೆ ಬಾರದೆ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ನಮ್ಮ ಬೂತ್ ಏಜೆಂಟ್ಗಳು ಪರಿಶೀಲನೆ ಮಾಡಿದಾಗ, ಅರ್ಜಿಯಲ್ಲಿ ತಾನು ಸ್ಥಳಿಯನಲ್ಲ ನನ್ನ ನಿವಾಸ ಬೇರೆ ರಾಜ್ಯಗಳಲ್ಲಿ ಇದೆ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆ ಮೂಲಕ ಬಹಳ ವ್ಯವಸ್ಥಿತವಾಗಿ ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.ಈ ಬಗ್ಗೆ ತಹಶೀಲ್ದಾರ್ ಹಾಗೂ ಡಿಸಿಗಳಿಗೂ ದೂರುಗಳು ದಾಖಲಾಗಿವೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ ಆಳಂದದಲ್ಲಿ ಒಂದು ಬೂತ್ ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಹಾಕಲಾಗಿರುವವರಲ್ಲಿ ಬಹುತೇಕ ಕಾಂಗ್ರೆಸ್ ಮತದಾರರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೇ ಯಾರು ಮತ ಹಾಕುತ್ತಾರೆ ಎಂದು ಬೇರೆ ರಾಜ್ಯದವರಿಗೆ ಮಾಹಿತಿ ನೀಡುವವರು ಯಾರು? ಈ ಮಾಹಿತಿ ಆ ಸ್ಥಳೀಯ ಬೂತ್ ನವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆಯವರಿಂದ ಈ ಕೆಲಸ ಅಸಾಧ್ಯ. ಬಿಜೆಪಿ ಕಾಂಗ್ರೆಸ್ ಮತದಾರರ ಪಟ್ಟಿ ಕಲೆಹಾಕಲು ಕೆಲವರನ್ನು ನೇಮಿಸಿದಂತಿದೆ ಎಂದು ಆರೋಪಿಸಿದ್ದಾರೆ.ಬಿಜೆಪಿ ಅವರ ಸಮೀಕ್ಷೆಯಲ್ಲಿ ಅವರಿಗೆ ಸೋಲು ಖಚಿತವಾಗಿದ್ದು ಇದಕ್ಕಾಗಿ ಇವರು ಈಗ ಟಿಪ್ಪು, ರಾಣಿ ಅಬ್ಬಕ್ಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಅಮಿತ್ ಶಾ ಅವರಿಗೆ ರಾಣಿ ಅಬ್ಬಕ್ಕ ಯಾರು ಅವರ ಇತಿಹಾಸವೇನು ಎಂದು ಗೊತ್ತೇ ಇಲ್ಲ. ಬೇಕಾದರೆ ಅವರನ್ನು ಕರೆಸಿ ಅವರ ಇತಿಹಾಸ ಏನು ಎಂದು ಹೇಳಲಿ ಎಂದು ಸವಾಲು ಹಾಕುತ್ತೇನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada