ಮುಖ್ಯಮಂತ್ರಿಯಾದವರು ರಾಜ್ಯದ ಜನರ ಬೇಡಿಕೆಗಳನ್ನು ಪರಿಗಣಿಸಬೇಕು. ಇದು ದಾಯಾದಿ ಜಗಳವಲ್ಲ, ಸಾರಿಗೆ ನೌಕರರನ್ನು ಕರೆದು ಮಾತಾನಾಡಿ. ಅದು ಬಿಟ್ಟು ಅವರುಗಳ ನಡುವಿನ ಒಗ್ಗಟ್ಟನ ಹೊಡೆಯುವ ಕೆಲಸ ಮಾಡಬೇಡಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು.
ರ್ನಾಟಕದಲ್ಲಿ ಮಾಡಲಾಗುತ್ತಿರುವ ಕೊರೋನಾ ಕರ್ಫ್ಯೂ ಬೋಗಸ್. ರಾತ್ರಿ ಹೊತ್ತಲ್ಲಿ ಕರ್ಫ್ಯೂ ಮಾಡಿದರೆ ಆಗುವ ಪ್ರಯೋಜನವಾದರೂ ಏನು. ಆರು ಕೋಟಿ ಜನರಲ್ಲಿ ನಾಲ್ಕು ಕೋಟಿ ಜನ ಮಲಗಿರುತ್ತಾರೆ. ಕರ್ಫ್ಯೂ ಬದಲು ಆಸ್ಪತ್ರೆಗಳಲ್ಲಿ ಬೆಡ್, ಔಷಧಿ, ವೆಂಟಿಲೇಟರ್ ಕೊಡಿ. ಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನ. ಈಗಲಾದರೂ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳಲಿ ಎಂದು ನೈಟ್ ಕರ್ಫ್ಯೂ ವಿರುದ್ಧ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದರು.
ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಸರ್ಕಾರ ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ವಿಧಿಸಿದೆ. ಇದಕ್ಕೆ ಹಲವು ಜನರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ವಾಟಾಳ್ ನಾಗರಾಜ್ ಅವರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಮುಷ್ಕರ ಮುಂದಾಳತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ವಾಟಾಳ್ ನಾಗರಾಜ್, ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧನ ಮಾಡಿರೋದು ಸರಿಯಲ್ಲ. ಸರ್ಕಾರ ಹಠಮಾರಿತನವನ್ನು ಬಿಡಬೇಕು. ಯಡಿಯೂರಪ್ಪ ದ್ವೇಷವನ್ನು ಬಿಡಬೇಕು. ಬಂಧನ ಮಾಡಿರೋದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಾರಿಗೆ ನೌಕರರನ್ನು, ಮುಖಂಡರನ್ನು ಕರೆದು ಮಾತುಕತೆ ನಡೆಸಲಿ. ಪರ್ಯಾಯ ವ್ಯವಸ್ಥೆ ಅನ್ನೋದು ದೊಡ್ಡ ದರೋಡೆ. ರಿಕ್ಷಾ, ಖಾಸಗಿ ಬಸ್ ಗಳು, ಟ್ಯಾಕ್ಸಿಗಳು ಸಾರ್ವಜನಿಕರನ್ನ ಕೊಳ್ಳೆ ಹೊಡೆಯುತ್ತಿವೆ. ಈ ಕೂಡಲೇ ಕೋಡಿಹಳ್ಳಿ ಅವರನ್ನ ಬಂಧಮುಕ್ತ ಮಾಡಲಿ ಎಂದು ಆಗ್ರಹಿಸಿದರು.