ಶಿವಮೊಗ್ಗ: ದಸರಾ ಅಂಗವಾಗಿ ಇಲ್ಲಿನ ಮಲವಗೊಪ್ಪದಲ್ಲಿ ಭಾನುವಾರ ನಡೆದ ರೈತ ದಸರಾದಲ್ಲಿ ಕೆಸರ ಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆಗಳು ಗಮನ ಸೆಳೆದವು.
ಕೆಸರು ಗದ್ದೆಯಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದ ತಂಡಗಳು ಗೆಲುವಿಗಾಗಿ ನಡೆಸಿದ ಸೆಣಸಾಟ ಪ್ರೇಕ್ಷಕರ ಮನರಂಜಿಸಿತು. 10 ವರ್ಷ ಮೇಲ್ಪಟ್ಟ ಬಾಲಕರಿಗೆ, 18 ವರ್ಷ ಮೇಲ್ಪಟ್ಟ ಸ್ಪರ್ಧೆ ನಡೆದಿದೆ. ಮಹ್ಮದ್ ಅಸ್ಲಾಂ, ತರುಣ್, ಲಕ್ಷ್ಮಣ್, ರೋಹಿತ್, ಲೋಹಿತ್ ಅರುಣ್ 10 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಗೆದ್ದರು. 18 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಮುರುಳಿ, ಅಭಿಷೇಕ್, ದಿನೇಶ್ ನಾಯ್ಕ್ ಸ್ಪರ್ಧೆಯಲ್ಲಿ ಗೆಲವು ಸಾಧಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಆಹಾರ ದಸರಾ ಕಾರ್ಯಕ್ರಮದಲ್ಲಿ ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆ ಗಮನ ಸೆಳೆಯಿತು.
ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ: ನಗರದ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಪಾಲಿಕೆ ಉಪಮೇಯರ್ ಶಂಕರ್ಗನ್ನಿ, ಸದಸ್ಯರಾದ ಅನಿತಾ ರವಿಶಂಕರ್, ಸುವರ್ಣ ಶಂಕರ್, ಎಸ್.ಎನ್.ಚನ್ನಬಸಪ್ಪ, ರೇಖಾರಂಗನಾಥ್ ಇದ್ದರು.
ಸಾಂಸ್ಕೃತಿಕ ಸ್ಪರ್ಧೆ- ಎಮ್ಮೆಹಟ್ಟಿಯ ಯುವಕರ ಸಂಘಕ್ಕೆ ಪ್ರಥಮ ಸ್ಥಾನ: ದಸರಾ ಅಂಗವಾಗಿ ನಗರದ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಮ್ಮೆಹಟ್ಟಿಯ ಗಜಾನನ ಡೊಳ್ಳು ಮತ್ತು ಸಾಂಸ್ಕೃತಿಕ ಯುವಕರ ಸಂಘವು ಪ್ರಥಮ ಸ್ಥಾನ ಗಳಿಸಿದೆ.
ಡೊಳ್ಳು ಮತ್ತು ವೀರಗಾಸೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಘದ ಕಲಾವಿದರು ಆಕರ್ಷಕ ನೃತ್ಯದ ಮೂಲಕ ಸಾರ್ವಜನಿಕರ ಮನಸೂರೆಗೊಂಡರು. ಅವರು ₹ 30 ಸಾವಿರ ಬಹುಮಾನ ಪಡೆದಿದ್ದಾರೆ.