ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಟಿಂ ಇಂಡಿಯಾ ಪರ 711 ವಿಕೆಟ್ಗಳನ್ನು ಪಡೆದಿದ್ದು, 28 ಬಾರಿ 5-ವಿಕೆಟ್ ಗೊಂಚಲು ಮತ್ತು ಐದು ಬಾರಿ 10 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತಂಡದಿಂದ ಹೊರಗೇ ಉಳಿದಿದ್ದ ಭಜ್ಜಿ, ಅವಕಾಶಗಳ ಕೊರತೆಯೊಂದಿಗೆ ವಯಸ್ಸೂ ಸಹ 41 ದಾಟಿದ ನಡುವೆ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್ಗೆ ರಾಜೀನಾಮೆ ಘೋಷಿಸಿದ್ದಾರೆ.
ಜೀವನ ಹೊಸ ಅಧ್ಯಾಯಕ್ಕೆ ಕಾಲಿಡಲು ಮುಂದಾಗಿರುವ ಭಜ್ಜಿ, ಇದೀಗ ಕೆಲವೊಂದು ಸ್ಫೋಟಕ ವಿಷಯಗಳನ್ನು ಹೊರ ಹಾಕಲು ಮುಂದಾಗಿದ್ದಾರೆ. ತಾವು ಟೀಂ ಇಂಡಿಯಾದಿಂದ ಹೊರಗುಳಿಯಲು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮತ್ತು ಬಿಸಿಸಿಐ ಕಾರಣ ಎಂದಿದ್ದಾರೆ.
“ನನಗೆ ಅದೃಷ್ಟ ಯಾವಾಗಲೂ ಚೆನ್ನಾಗಿತ್ತು. ಕೆಲವೊಂದು ಬಾಹ್ಯ ವಿಷಯಗಳು ನನ್ನ ಪರ ಇರಲಿಲ್ಲ, ಅವು ಸಂಪೂರ್ಣವಾಗಿ ನನ್ನ ವಿರುದ್ಧ ಇದ್ದವು. ನಾನು ಬೌಲಿಂಗ್ ಮಾಡುತ್ತಿದ್ದ ರೀತಿ ಹಾಗೂ ಮುಂದೆ ಸಾಗುತ್ತಿದ್ದ ಬಗೆಯ ಕಾರಣ ಹೀಗಾಗಿರಬಹುದು. ನಾನು 400 ವಿಕೆಟ್ಗಳನ್ನು ಪಡೆದಾಗ ನನಗೆ 31 ವರ್ಷ ವಯಸ್ಸು, ಇನ್ನೂ 4-5 ವರ್ಷಗಳು ಆಡಿದ್ದರೆ, ನನಗೆ ನಾನು ಕಟ್ಟಿಕೊಂಡಿದ್ದ ಮಟ್ಟವನ್ನು ಗಮನದಲ್ಲಿಟ್ಟುಕೊಂಡಲ್ಲಿ, ನಾನು ಇನ್ನೂ 100-150 ವಿಕೆಟ್ಗಳನ್ನು ಪಡೆಯಬಹುದಿತ್ತು,” ಎಂದು ಹರ್ಭಜನ್ ತಿಳಿಸಿದ್ದಾರೆ.
“ಹೌದು ಧೋನಿ ಆಗ ನಾಯಕರಾಗಿದ್ದರು ಆದರೆ ಇದು ಅವರ ತಲೆ ಮೀರಿದ ವಿಚಾರ ಎನಿಸುತ್ತದೆ. ಇದರಲ್ಲಿ ಬಿಸಿಸಿಐನ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ನನಗೆ ಅನಿಸುತ್ತದೆ, ಅವರಿಗೆ ನಾನು ಬೇಕಿರಲಿಲ್ಲ ಮತ್ತು ನಾಯಕ ನನ್ನನ್ನು ಬೆಂಬಲಿಸಬಹುದಿತ್ತು, ಆದರೆ ಬಿಸಿಸಿಐಗಿಂತ ಒಬ್ಬ ನಾಯಕ ಯಾವತ್ತೂ ದೊಡ್ಡವನಾಗಲಾರ.
ವಿದಾಯದ ವೇಳೆ ತಮಗೊಂದು ಬೀಳ್ಕೊಡುಗೆ ಪಂದ್ಯದ ಅವಕಾಶ ಸಿಗದ ಕಾರಣ ಬೇಸರ ವ್ಯಕ್ತಪಡಿಸಿದ ಭಜ್ಜಿ, “ಭಾರತದ ಜೆರ್ಸಿ ಧರಿಸಿ ವಿದಾಯ ಹೇಳುವುದು ಪ್ರತಿಯೊಬ್ಬ ಆಟಗಾರನ ಇಚ್ಛೆ. ಆದರೆ ಕೆಲವೊಮ್ಮೆ ಅದೃಷ್ಟ ನಿಮ್ಮ ಪಾಲಿಗೆ ಇರದ ಕಾರಣ ನೀವು ಇಚ್ಛಿಸಿದ್ದು ಆಗುವುದಿಲ್ಲ. ನೀವು ಕಂಡಿರುವ ದೊಡ್ಡ ಹೆಸರುಗಳಾದ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಹಾಗೂ ಇತರರು ವಿದಾಯ ಹೇಳಿದಾಗ ಈ ಅವಕಾಶ ಪಡೆಯಲಿಲ್ಲ,” ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮನ್ನು ನಡೆಸಿಕೊಂಡ ವಿಚಾರವನ್ನು ಅಭಿಮಾನಿಗಳ ಮುಂದೆ ಇಡಲು ತಾವು ತಮ್ಮ ಜೀವನದ ಕಥೆಯನ್ನು ಚಿತ್ರ ಅಥವಾ ವೆಬ್ ಸೀರೀಸ್ ಮೂಲಕ ತರಲು ಇಚ್ಛಿಸುವುದಾಗಿ ಭಜ್ಜಿ ಹೇಳಿಕೊಂಡಿದ್ದಾರೆ. ಹಾಗೇನಾದೂ ಆದರೆ ವಿಲನ್ ಪಾತ್ರದಲ್ಲಿ ಒಬ್ಬರಲ್ಲದೇ ಅನೇಕರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada