2030ರ ವೇಳೆಗೆ ದೇಶದಿಂದ ಹೊರಸೂಸಲಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಕೇಂದ್ರ ಸರ್ಕಾರವು ಕಂಕಣ ಬದ್ಧವಾಗಿದೆ. ಹಾಗಾಗಿಯೇ, ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಜಾಗದಲ್ಲಿ ಎಲೆಕ್ಟ್ರಿಕ್ ಚಾಲಿತ ಅಥವಾ ಸಿಎನ್ಜಿ ವಾಹನಗಳನ್ನು ಪರಿಚಯಿಸಲು ಅನೇಕ ಸಿದ್ಧತೆಗಳನ್ನು ಮಾಡಿಕೊಂಡಿದೆ.ಉತ್ತಮ ಗುಣಮಟ್ಟ ಮತ್ತು ಜನಸಾಮಾನ್ಯರ ನಿರೀಕ್ಷೆಗೆ ಅನುಗುಣವಾದ ಎಲೆಕ್ಟ್ರಿಕ್ ವಾಹನಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೂ, ಪೆಟ್ರೋಲ್ ದುಬಾರಿಯಾಗಿರುವ ಕಾರಣ ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಲಕ್ಷಗಟ್ಟಲೆ ಪಾವತಿಸಿ ಖರೀದಿ ಮಾಡುತ್ತಿದ್ದಾರೆ.ಈ ನಡುವೆ 2022-23ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು , ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವತ್ತ ದೊಡ್ಡ ಹೆಜ್ಜೆ ಇಡುವ ಸುಳಿವು ಕೊಟ್ಟಿದ್ದಾರೆ.ಮಹಾನಗರಗಳಲ್ಲಿ ಕೆಲವೆಡೆ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಸಂಚಾರವನ್ನೇ ನಿರ್ಬಂಧಿಸುವ ಶೂನ್ಯ ಇಂಗಾಲ ಹೊರಸೂಸುವಿಕೆ ವಿಶೇಷ ವಲಯಗಳನ್ನು ಕೂಡ ರಚಿಸಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ.’ಶೂನ್ಯ ಪಳೆಯುಳಿಕೆ ಇಂಧನ ನೀತಿ’ ಎಂದು ಕರೆಯಲಾಗಿರುವ ಈ ಕ್ರಮದ ಬಗ್ಗೆ ಬಜೆಟ್ನಲ್ಲಿ ಹೆಚ್ಚು ವಿವರಣೆ ಲಭ್ಯವಾಗಿಲ್ಲ. ಆದರೆ, ಸ್ಪೆಷಲ್ ಮೊಬಿಲಿಟಿ ಝೋನ್ಸ್ ಮಾತ್ರ ಮುಂದಿನ ಎರಡು ವರ್ಷಗಳಲ್ಲಿ ಜಾರಿಗೆ ಬರುವುದಂತೂ ನಿಶ್ಚಯ ಎಂದಿದ್ದಾರೆ ತಜ್ಞರು. ಇದರ ಜತೆಗೆ ಪ್ರಸಕ್ತ ರಸ್ತೆಗಿಳಿಯುವ ಹೊಸ ವಾಹನಗಳ ಎಂಜಿನ್ ಗುಣಮಟ್ಟವನ್ನು ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಹೊರಸೂಸುವ ವಾಹನಗಳಿಗೆ ಮಾತ್ರವೇ ಪರವಾನಗಿ ನೀಡಲಾಗುತ್ತಿದೆ. ಮುಖ್ಯವಾಗಿ 10 ವರ್ಷಕ್ಕೂ ಅಧಿಕವಾಗಿ ಬಳಸಲಾದ ಡೀಸೆಲ್ ಚಾಲಿತ ಭಾರಿ ತೂಕದ ವಾಹನಗಳಿಗೆ ನೋಂದಣಿ ನವೀಕರಣವನ್ನು ದಿಲ್ಲಿಯಲ್ಲಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ಹಳೆಯ ಲಾರಿಗಳು ವಾಯುಮಾಲಿನ್ಯ ಮಾಡುತ್ತ ರಸ್ತೆಗಿಳಿಯುವುದು ತಪ್ಪಲಿದೆ.
ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರ ಇಲ್ಲದ ವಿಶೇಷ ವಲಯ ರಚನೆ
Please follow and like us: