ಮೈಸೂರು: ‘ರಾಜಕಾರಣದಲ್ಲಿ ಯಾರು ಸತ್ಯವಂತರು? ಯಾರು ಸಾಚಾ? ಕಾಂಗ್ರೆಸ್ನವರು ಏನೂ ಮಾಡಿಯೇ ಇಲ್ವೇ? ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ.
ಜನತಾ ಜಲಧಾರೆ ಸಂಕಲ್ಪ ಯಾತ್ರೆ ಹಿನ್ನೆಲೆ ಮೈಸೂರಿಗೆ ಶನಿವಾರ ಆಗಮಿಸಿದ್ದ ದೇವೇಗೌಡರು ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 40% ಕಮಿಷನ್ ವಿಚಾರ ಭಾರೀ ಕೋಲಾಹಲ ಎಬ್ಬಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕಾರಣದಲ್ಲಿ ಯಾರು ಸತ್ಯವಂತರು? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಯಾರು ಸಾಚ ಇದ್ದಾರೆ ಹೇಳಿ? ಕಾಂಗ್ರೆಸ್ ಸರ್ಕಾರ ಇದ್ದಾಗ 10% ಸರ್ಕಾರ ಅಂತ ಪ್ರಧಾನಿಯೇ ಆರೋಪ ಮಾಡಿದ್ರು. ಆಗಲೂ ನಾನು ಆರೋಪ ಮಾಡಲಿಲ್ಲ. ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದರು.
ಜಲಧಾರೆ ಕುಮಾರಸ್ವಾಮಿ ಅವರ ಮಿದುಳಿನ ಕೂಸು. ಶಾಸಕರು, ಮುಖಂಡರನ್ನು ಒಗ್ಗೂಡಿಸಿ ಕಾರ್ಯಕ್ರಮ ರೂಪಿಸಿದ್ದಾರೆ. ನಾನೂ ಮೈಸೂರಿನಿಂದ ಯಾತ್ರೆ ಶುರು ಮಾಡಿದ್ದೇನೆ. ಜನರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಮೇ 8ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ನಮ್ಮ ಹಕ್ಕಿಗೆ ಹೋರಾಟ ಮಾಡುವಾಗ ಬೇರೊಬ್ಬರಿಗೆ ನೋವು ಮಾಡಬೇಕು ಅಂತಲ್ಲ. ನೀರಾವರಿ ವಿಚಾರದಲ್ಲಿ ತಮಿಳರು ಮಾಡಿರುವ ಅನ್ಯಾಯವನ್ನು ಮೊದಲ ಭಾಷಣದಲ್ಲೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆ. ವಾಜಪೇಯಿ, ನರಸಿಂಹರಾವ್, ಮೋದಿ ಕಾಲದಲ್ಲಿ ಏನಾಗಿದೆ ಅಂತ ಎಲ್ಲವನ್ನೂ ಹೇಳಬಲ್ಲೆ. ದುರದೃಷ್ಟವೆಂದರೆ ಯಾರೂ ನಮ್ಮ ಪರವಾಗಿ ಇಲ್ಲ. ವ್ಯವಸಾಯಕ್ಕೆ ಕೊಟ್ಟಿರುವ ನೀರನ್ನೇ ಕುಡಿಯುವ ನೀರಿಗೂ ಬಳಸಿಕೊಳ್ಳಬೇಕಿದೆ. ಇದು ಒಂದು ಜಾತಿ, ಪಕ್ಷದ ಪ್ರಶ್ನೆಯಲ್ಲ. ನಾನು ಎಲ್ಲಿವರೆಗೆ ಬದುಕಿರುತ್ತೇನೋ ಗೊತ್ತಿಲ್ಲ. ಅಧಿಕಾರಕ್ಕಾಗಿ ದೇವೇಗೌಡರು ಹೋರಾಟ ಮಾಡಲ್ಲ. ನನ್ನ ಜೀವಿತಾವಧಿಯಲ್ಲಿ ನನ್ನ ಹೋರಾಟಕ್ಕೆ ಫಲ ಸಿಕ್ಕಿಲ್ಲ ಎನ್ನುವ ನೋವಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada