ಬೆಂಗಳೂರು: ಯುವತಿ ಪ್ರೀತಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಆಯಸಿಡ್ ದಾಳಿ ಮಾಡಿ, ತಮಿಳುನಾಡಿನ ತಿರುವಣ್ಣಾಮಲೈಗೆ ಪರಾರಿಯಾಗಿ ಆಶ್ರಮವೊಂದರಲ್ಲಿ ಸೇರಿಕೊಂಡು ಸ್ವಾಮೀಜಿ ವೇಷ ಹಾಕಿಕೊಂಡಿದ್ದ ನಾಗೇಶ್ ಪೊಲೀಸರಿಗೆ ಒಂದೊಂದೇ ವಿಷಯ ಬಾಯಿ ಬಿಡುತ್ತಿದ್ದಾನೆ.
ತಾನು ಯುವತಿಗೆ ಆಯಸಿಡ್ ಹಾಕಿದ್ದಕ್ಕೆ ಆಕೆಯೇ ಕಾರಣ, ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆಯಸಿಡ್ ಹಾಕ್ತೀನಿ ಎಂದು ಯುವತಿಗೆ ಹೇಳಿದ್ದೆ. ಆದರೆ, ಯುವತಿ ಅದನ್ನು ಅವರ ತಂದೆಗೆ ಹೇಳಿದಳು. ಬಳಿಕ ಅವರ ತಂದೆ ನನ್ನ ಅಣ್ಣನಿಗೆ ಹೇಳದರು. ನನ್ನ ಅಣ್ಣ ನನಗೆ ಚೆನ್ನಾಗಿ ಬೈದಿದ್ದ. ಇದರಿಂದ ಆಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿಬಿಟ್ಟೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ನಾಗನ ಕುರಿತು ಇನ್ನಷ್ಟು ವಿಷಯವನ್ನು ಪೊಲೀಸರು ಕಲೆ ಹಾಕಿದ್ದಾರೆ.
ಅದೇನೆಂದರೆ, ಯುವತಿ ಮತ್ತು ನಾಗನಿಗೆ 7 ವರ್ಷಗಳಿಂದಲೂ ಪರಿಚಯವಿತ್ತು. ಆಕೆಯಿದ್ದ ಮನೆಯಲ್ಲಿಯೇ ಒಂದು ರೂಂ ಬಾಡಿಗೆಗೆ ಪಡೆದುಕೊಂಡಿದ್ದ ಈತ. ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ, ಆದರೆ ಆಕೆ ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ನಾಗೇಶ್ ಮಗಳಿಗೆ ತೊಂದರೆ ಕೊಡುತ್ತಿರುವುದು ತಿಳಿದ ಆಕೆಯ ಪಾಲಕರು ಅವನನ್ನು ಮನೆಯಿಂದ ಖಾಲಿ ಮಾಡಿಸಿದ್ದರು. ಆದರೆ ಸಮೀಪ ಇರುವ ಗೆಳೆಯನ ಮನೆಯಿಂದ ನಾಗೇಶ್ ಈಕೆಯ ಮಾಹಿತಿ ಪಡೆಯುತ್ತಿದ್ದ. ಯುವತಿಗೆ ವರನನ್ನು ಹುಡುಕುತ್ತಿರುವುದೂ ತಿಳಿದುಬಂತು.
ಹೌಸ್ ಕೀಪಿಂಗ್ ಕೆಲಸಕ್ಕಾಗಿ ಆಯಸಿಡ್ ಖರೀದಿಸುತ್ತಿದ್ದ ಕಂಪನಿಯೊಂದರ ಪರಿಚಯ ಮಾಡಿಕೊಂಡ ಈತ ಆಯಸಿಡ್ ಖರೀದಿಸಿದ್ದ. ಏ.27ರಂದು ಮತ್ತೊಮ್ಮೆ ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಕೇಳಿದ್ದಾನೆ. ಆಗಲೂ ಏಕೆ ನಿರಾಕರಿಸಿದಾಗ ಆಯಸಿಡ್ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.
ಇಷ್ಟು ಮಾಡಿದ ಕೂಡಲೇ ವಕೀಲರನ್ನು ಭೇಟಿಯಾಗಿದ್ದ ನಾಗೇಶ್, ನಾನು ಆಯಸಿಡ್ ದಾಳಿ ಮಾಡಿ ಬಂದಿದ್ದೇನೆ. ಪೊಲೀಸರಿಗೆ ಇನ್ನೂ ಈ ವಿಷಯ ತಿಳಿಯಲಿಲ್ಲ. ಇನ್ನೂ ಎಫ್ಐಆರ್ ಆಗಿರುವುದಿಲ್ಲ. ನನಗೆ ಜಾಮೀನು ಬೇಕು ಎಂದಿದ್ದಾನೆ. ಪೊಲೀಸ್ ಠಾಣೆಗೆ ಹೋಗಿ ಶರಣಾಗು. ಎಫ್ಐಆರ್ ಆಗಲಿದೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸೋಣ ಎಂಬುದಾಗಿ ವಕೀಲರು ಸಲಹೆ ನೀಡಿದ್ದರು. ಈ ಕುರಿತು ನಾಗೇಶನೇ ಹೇಳಿದ್ದಾನೆ. ನಂತರ ಸ್ವಾಮೀಜಿ ವೇಷಧರಿಸಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada