ಬೆಂಗಳೂರು,ಜೂ.5- ರಾಜ್ಯಸಭೆಗೆ ಸ್ರ್ಪಧಿಸಿರುವ ಲೆಹರ್ ಸಿಂಗ್ ಸಿರೋಯ ಅವರು ಪ್ರಮಾಣಪತ್ರದಲ್ಲಿ ತಮ್ಮ ನಿವಾಸದ ವಿಳಾಸವನ್ನು ಕಲಬುರಗಿ ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 8 ತಿಂಗಳು ಕಳೆದರೂ ಕೂಡ ಈವರೆಗೂ ಮೇಯರ್ ಉಪಮೇಯರ್ ಆಯ್ಕೆಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಹಿಡಿತದಲ್ಲಿರುವ ನಗರದಲ್ಲಿ ಪಾಲಿಕೆಯ ಅಧಿಕಾರ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ ಚುನಾವಣೆ ನಡೆದ ದಿನದಿಂದಲೂ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸದೆ ಮೀನಾಮೇಷ ಎಣಿಸುತ್ತಿದೆ.ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4, ಪಕ್ಷೇತರರು ಒಂದು ಸ್ಥಾನ ಗೆದ್ದಿದ್ದಾರೆ. ಸಂಖ್ಯಾಬಲ ಇಲ್ಲದೆ ಇದ್ದರೂ ಬಿಜೆಪಿ ಬೆಂಗಳೂರಿನಿಂದ ವಿಧಾನಪರಿಷತ್ ಸದಸ್ಯರ ವಿಳಾಸವನ್ನು ಕಲಬುರಗಿಗೆ ಸ್ಥಳಾಂತರಿಸಿ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದೆ.ಈ ಮೊದಲು 7 ಮಂದಿ ವಿಧಾನಪರಿಷತ್ ಸದಸ್ಯರು ಕಲಬುರಗಿ ನಿವಾಸಿಗಳೆಂದು ಪ್ರಮಾಣ ಪತ್ರ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ಅವರಲ್ಲಿ ಇಬ್ಬರನ್ನು ತಿರಸ್ಕರಿಸಿ ಬಾಕಿ 5 ಮಂದಿಯನ್ನು ಮತದಾರರನ್ನಾಗಿ ಉಳಿಸಲಾಗಿದೆ. ಸ್ಥಳೀಯವಾಗಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ 4 ಮತಗಳಿವೆ. ಕಲಬುರಗಿ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಗೆಲುವಿಗೆ ಕನಿಷ್ಠ ಪ್ರಮಾಣದ ಬೆಂಬಲ ಅಗತ್ಯವಿದೆ. ಆದರೆ ಜೆಡಿಎಸ್ ಕಳೆದ 8 ತಿಂಗಳಿನಿಂದಲೂ ಈ ವಿಷಯದಲ್ಲಿ ಹಗ್ಗಜಗ್ಗಾಟ ನಡೆಸುತ್ತಿದೆ.ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರೇ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದರೂ ದಳಪತಿಗಳು ಪಟ್ಟು ಸಡಿಸಿಲ್ಲ ಎಂದು ಹೇಳಲಾಗಿದೆ. 4 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮೇಯರ್ ಸ್ಥಾನ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಚುನಾವಣೆ ವಿಷಯದಲ್ಲಿ ಭಾರೀ ಪೈಪೋಟಿಗಳಾಗಿವೆ.ಈಗ ರಾಜ್ಯಸಭೆ ಚುನಾವಣೆಗೆ ಸ್ರ್ಪಧಿಸಿರುವ ಲೆಹರ್ ಸಿಂಗ್ ಅವರು ತಮ್ಮ ಪ್ರಮಾಣ ಪತ್ರದಲ್ಲಿ ವಾಸದ ಮನೆಯ ವಿಳಾಸವನ್ನು ಕಲಬುರಗಿ ಎಂದು ನಮೂದಿಸಿದ್ದಾರೆ. ಈ ಮೊದಲು ವಿಧಾನಪರಿಷತ್ ಸದಸ್ಯರಾಗಿದ್ದ ಅವರು, ಬೆಂಗಳೂರಿನ ಆರ್ಎಂವಿ ಬಡಾವಣೆಯ 2ನೇ ಹಂತದ ನಿವಾಸಿ ಎಂದು ವಿಳಾಸ ನಮೂದಿಸಿದ್ದರು. ಈಗ ಕಲಬುರಗಿ ಸ್ಟೇಷನ್ ಬಜಾರ್ ನಿವಾಸಿ ಎಂದು ಪ್ರಮಾಣ ಪತ್ರ ಸಲ್ಲಿಸಿರುವುದರ ಹಿಂದೆ ಮೇಯರ್ , ಉಪಮೇಯರ್ ಚುನಾವಣೆಯನ್ನು ಗೆಲ್ಲುವ ಹುನ್ನಾರ ಅಡಗಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada