ನವದೆಹಲಿ, ಜೂನ್ 30: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಅಣಿಯಾಗುತ್ತಿವೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣೆಗೆ ಒಂದು ಹೆಜ್ಜೆ ಮುಂದಿಟ್ಟು ಓಡುತ್ತಿದೆ. ಕಾಂಗ್ರೆಸ್ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ 130 ಸ್ಥಾನ ಗೆಲ್ಲುತ್ತದೆ ಎನ್ನುವ ವರದಿ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಕೊಟ್ಟಂತೆ ಆಗಿದೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿರುವ ಗುರುವಾರ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. “ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ. ನಾವು 130ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ” ಎಂದು ಹೇಳಿದರು.
“ಕಾಂಗ್ರೆಸ್ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಅಭಿಪ್ರಾಯ ಬೇರೆ ಇರುತ್ತದೆ, ಜನರ ಅಭಿಪ್ರಾಯ ಬೇರೆ ಇರುತ್ತದೆ. ಮಾದರಿ ಸಮೀಕ್ಷೆ ಎಂದರೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿರುತ್ತದೆ. ಅಂದರೆ ಮುಖ್ಯಮಂತ್ರಿಗಳು ಜನರ ಅಭಿಪ್ರಾಯ ಒಪ್ಪಿಕೊಳ್ಳಲ್ಲ ಎಂದಾಯಿತು. ಅದೇನೇ ಇದ್ದರೂ ನಾವು ಸ್ಪಷ್ಟಬಹುಮತದ ಮೂಲಕ ಗೆಲ್ಲುವುದನ್ನು ಯಾರಿಂದಲೂ ಅಲ್ಲಗಳೆಯಲು ಆಗಲ್ಲ” ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಮಂಡ್ಯದಲ್ಲಿ ಬಿಜೆಪಿಗೆ ಅಭ್ಯರ್ಥಿಗಳು ಯಾರಿದ್ದಾರ”ಕಾಂಗ್ರೆಸ್ ಪಕ್ಷಕ್ಕೆ ಇರುವಷ್ಟು ಅಭ್ಯರ್ಥಿಗಳು ಬೇರೆ ಯಾವ ಪಕ್ಷಗಳಿಗೂ ಇಲ್ಲ, ನಮಗೆ ಒಂದೊಂದು ಕ್ಷೇತ್ರದಲ್ಲಿ 10- 12 ಜನ ಗೆಲ್ಲುವ ಅಭ್ಯರ್ಥಿಗಳು ಇದ್ದಾರೆ. ಕೆಲವೊಮ್ಮೆ ಇದು ಸಮಸ್ಯೆ ಆಗುತ್ತದೆ. ಕಾರಣ ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಾಗಲ್ಲ. ಹಾಗೆ ನೋಡಿದರೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ. ಉದಾಹರಣೆಗೆ ಮೈಸೂರು ಭಾಗದಲ್ಲಿ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು?. ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ. ಆರ್. ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಇಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಜೆಡಿಎಸ್ನವರು ಸಂಪರ್ಕದಲ್ಲಿದ್ದಾರೆ
“ಬಿಜೆಪಿಯಲ್ಲಿ ಟಿಕೆಟ್ ಸಿಗದವರು ನಮ್ಮಲ್ಲಿಗೆ ಬರುತ್ತಾರೆ. ನಮ್ಮಲ್ಲಿ ಟಿಕೆಟ್ ಸಿಗದವರು ಬಿಜೆಪಿಗೆ ಹೋಗುತ್ತಾರೆ, ಇದೆಲ್ಲ ಚುನಾವಣಾ ಸಮಯದಲ್ಲಿ ಸಾಮಾನ್ಯ ವಿಷಯ. ಯಾರಿಗೆ ಸೈದ್ಧಾಂತಿಕ ಬದ್ಧತೆ ಇರುತ್ತದೆ. ಅವರು ಪಕ್ಷ ಬಿಟ್ಟು ಹೋಗಲ್ಲ. ಬಿಜೆಪಿ ಮತ್ತು ಜೆಡಿಎಸ್ನ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಇನ್ನೂ ಚುನಾವಣೆಗೆ 9 ತಿಂಗಳು ಇದೆ, ಈಗಲೇ ಯಾರು ಎಂದು ಹೇಳುವುದಕ್ಕೆ ಆಗಲ್ಲ. ಯಾರೆಲ್ಲಾ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು, ಪಕ್ಷದ ನಾಯಕತ್ವ ಒಪ್ಪಿಕೊಂಡು ಬರುತ್ತಾರೆ ಪಕ್ಷಕ್ಕೆ ನಿಷ್ಠಾವಂತರಾಗಿ ಇರುತ್ತೇವೆ ಎಂದು ಹೇಳುತ್ತಾರೆ ಅಂಥವರಿಗೆ ಟಿಕೆಟ್ ನೀಡುತ್ತೇವೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ನಿಷ್ಠೆ ಹೊಂದಿದ್ದರೇ ಅವಕಾಶ
“ಬಿಜೆಪಿಯಲ್ಲಿ ಬಹಳಷ್ಟು ಮಂದಿ ಆರ್ಎಸ್ಎಸ್ನವರಲ್ಲ. ಎಸ್. ಟಿ. ಸೋಮಶೇಖರ್ ಕಾಂಗ್ರೆಸ್ನಲ್ಲಿದ್ದು ಬಿಜೆಪಿ ಸೇರಿದ್ದು, ಅವರನ್ನು ಆರ್ಎಸ್ಎಸ್ ಅನ್ನೋಕಾಗುತ್ತಾ?. ಇಂಥವರು ಬಹಳಷ್ಟು ಜನ ಇದ್ದಾರೆ. ಸೋಮಶೇಖರ್ ಕಾಂಗ್ರೆಸ್ಗೆ ಮರಳಿ ಬರುತ್ತಾರೆ ಎಂಬುದು ನನ್ನ ಮಾತಿನ ಅರ್ಥ ಅಲ್ಲ. ಜೆಡಿಎಸ್ನಿಂದ ಬಿಜೆಪಿಗೆ ಹೋದವರೋ, ಕಾಂಗ್ರೆಸ್ನಿಂದ ಹೋದವರೋ, ಆರ್. ಎಸ್. ಎಸ್ ಮೂಲದವರೋ, ಹೀಗೆ ಯಾರೆಲ್ಲ ಪಕ್ಷಕ್ಕೆ ಬರುತ್ತಾರೆ, ನನ್ನ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂಬ ಭರವಸೆ ನೀಡಿ ಬಂದರೆ ಖಂಡಿತಾ ಅಂಥವರಿಗೆ ಪಕ್ಷದಲ್ಲಿ ಅವಕಾಶ ಇದೆ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಿದ್ದು ಹುಟ್ಟುಹಬ್ಬಕ್ಕೆ ರಾಹುಲ್ ಆಗಮನ
ಬಿಜೆಪಿಯ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ನಾನು 75 ವರ್ಷ ಪೂರೈಸಿರುವುದು ಸತ್ಯವಲ್ಲವಾ?. ಈ ಹುಟ್ಟು ಹಬ್ಬದ ಆಚರಣೆಯನ್ನು ನಾನು ಮಾಡುತ್ತಿಲ್ಲ, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ಮಾಡುತ್ತಿದ್ದಾರೆ. ನಾನು ಯಾವಾಗಲೂ ಸಾಮಾಜಿಕ ನ್ಯಾಯ, ಅಹಿಂದ ಮತ್ತು ಬಡವರ ಪರವಾಗಿ ಇರುವವನು. ಎಲ್ಲರಿಗೂ ನ್ಯಾಯ ಸಿಗಬೇಕು, ಅವಕಾಶ ವಂಚಿತ ಜನರಿಗೆ ನ್ಯಾಯ ಸಿಗಬೇಕು. ಅವರು ಕೂಡ ಮುಖ್ಯ ವಾಹಿನಿಗೆ ಬರಬೇಕು ಎಂಬ ನಂಬಿಕೆ ಇಟ್ಟುಕೊಂಡು ಹಿಂದಿನಿಂದಲೂ ಅದಕ್ಕೆ ಸರಿಯಾಗಿ ನಡೆದುಕೊಂಡು ಬಂದಿದ್ದೇನೆ, ಈ ವಿಚಾರದಲ್ಲಿ ರಾಜಿಯಾಗದೆ ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ. ನನ್ನ ಜನ್ಮದಿನದ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರು ಬರುತ್ತೇನೆ ಎಂದು ಹೇಳಿದ್ದಾರೆ. ಇದೊಂದು ವಿಶೇಷ ಸಂದರ್ಭ ಹಾಗಾಗಿ ಬರುತ್ತೇನೆ ಎಂದಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada