ಬೆಂಗಳೂರು: ಸಾಕಷ್ಟು ಟ್ರೈ ಮಾಡ್ದೆ ಸಾರ್, ಅವಳು ನನ್ನ ಪ್ರೀತಿಗೆ ಬೀಳಲಿಲ್ಲ.. ನೀವಾದ್ರೂ ಒಪ್ಸಿ ಸಾರ್… ಅವಳನ್ನು ಮದ್ವೆ ಆಗ್ತೀನಿ… ಎಂದು ಪೊಲೀಸರ ಬಳಿ ಆಯಸಿಡ್ ದಾಳಿಕೋರ ನಾಗೇಶ್ ಗೋಗರೆದಿದ್ದಾನೆ.
ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿರೋ ಆರೋಪಿ, ಪೊಲೀಸರ ಮುಂದೆಯೂ ಆ ಯುವತಿಯನ್ನ ಬಿಟ್ಟು ಇರಲು ಆಗಲ್ಲ ಎಂದಿದ್ದಾನೆ.
ನೀವಾದ್ರೂ ಒಪ್ಸಿ ಮದ್ವೆ ಮಾಡ್ಸಿ ಸಾರ್… ಇಲ್ಲಾ ಜೈಲಿಗೆ ಹಾಕಿ ಎಂದಿದ್ದಾನೆ. ಜೈಲಿಗೆ ಹಾಕ್ತೀರಾ.. ಮೂರೊತ್ತೂ ಊಟ ಹಾಕ್ತೀರಾ ಬಿಡಿ ಸಾರ್ ಎಂದು ಭಂಡತನ ಮೆರೆದಿದ್ದಾನೆ.
ನಾನು ಆಯಸಿಡ್ ಹಾಕೋಕೆ ಯುವತಿಯೇ ಕಾರಣ. ನಾನು ಆಯಸಿಡ್ ಹಾಕಬಾರದು ಅಂತಲೇ ಇದ್ದೆ. ಘಟನೆಯ ಹಿಂದಿನ ದಿನ ಬಾಯಿ ಮಾತಿಗೆ ಆಯಸಿಡ್ ಹಾಕ್ತೀನಿ ಎಂದಿದ್ದೆ. ಆದ್ರೆ ಯುವತಿ ತಂದೆಗೆ ಹೇಳಿ ಬಿಟ್ಟಿದ್ಳು. ಅವರ ತಂದೆ ನನ್ನ ಅಣ್ಣನಿಗೆ ಹೇಳಿ ಬೈಸಿದ್ರು. ಇದರಿಂದ ಆಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿ ಹಾಕಿಬಿಟ್ಟೆ ಎಂದಿದ್ದಾನೆ.
7 ವರ್ಷದ ಹಿಂದೆ ಯುವತಿ ಮನೆ ಮತ್ತು ಆರೋಪಿ ಮನೆ ಒಂದೇ ಬಿಲ್ಡಿಂಗ್ನಲ್ಲಿ ಇತ್ತಂತೆ. ಆ ವೇಳೆ ಆರೋಪಿ ಯುವತಿಗೆ ಲವ್ ಪ್ರಪೋಸ್ ಮಾಡಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು. ಆದರೂ ಆಕೆಯನ್ನು ಲವ್ ಮಾಡುವಂತೆ ಪದೇಪದೆ ಪೀಡಿಸುತ್ತಿದ್ದನಂತೆ. ಈ ಬಗ್ಗೆ ಯುವತಿ ತನ್ನ ಪಾಲಕರಿಗೆ ಹೇಳಿದ್ದಳಂತೆ. ಲವ್ ಮಾಡುವಂತೆ ಪೀಡಿಸುತ್ತಿದ್ದ ನಾಗೇಶ್ಗೆ ಯುವತಿಯ ಪಾಲಕರು ಬುದ್ಧಿ ಹೇಳಿ ಕಳುಹಿಸಿದ್ದರು. ಆದರೂ ಸುಮ್ಮನಾಗದ ಆತ, ಆಕೆಯ ಹಿಂದೆ ಬಿದ್ದಿದ್ದ. ಆಯಸಿಡ್ ದಾಳಿ ನಡೆಯೂಕು ಮುನ್ನಾ ದಿನ ಆಕೆಯನ್ನ ಭೇಟಿ ಮಾಡಿ ಪ್ರೀತಿ ವಿಷ್ಯ ಪ್ರಸ್ತಾಪಿಸಿದ್ದ. ಆಗ ಯುವತಿ ನೀನು ಅಣ್ಣನ ತರ. ನಿನ್ನನ್ನು ಮದುವೆ ಆಗುವ ಬಯಕೆ ಇಲ್ಲ. ಇನ್ನು ಪ್ರೀತಿಗೀತಿ ಆಗಿಬರಲ್ಲ ಎಂದಿದ್ದಳು. ಇದರಿಂದ ಸಿಟ್ಟಾದ ಆತ ಆಯಸಿಡ್ ಎರಚಿ ವಿಕೃತಿ ಮೆರೆದಿದ್ದ. ಪಾಪ ಏನೂ ತಪ್ಪು ಮಾಡದ ಯುವತಿ ನೋವಲ್ಲಿ ನರಳುತ್ತಿದ್ದಾಳೆ. ಇವನ ಹುಚ್ಚಾಟಕ್ಕೆ ಆಕೆಯ ಬದುಕೇ ಬಲಿಯಾಗಿದೆ. ಇಷ್ಟಾದರೂ ಆತ ಆಕೆ ಜತೆ ಮದ್ವೆ ಮಾಡ್ಸಿ ಎಂದು ಪೊಲೀಸರನ್ನೇ ಕೇಳಿದ್ದಾನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada