ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆಯಸಿಡ್ ದಾಳಿ ನಡೆಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸ್ವಾಮೀಜಿ ವೇಷಧಾರಿಯಾಗಿ ತಿರುವಣ್ಣಾಮಲೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಬಂಧಿಸಲಾಗಿದೆ.
16 ದಿನಗಳಿಂದ ನಾಪತ್ತೆಯಾಗಿದ್ದ ಆಯಸಿಡ್ ನಾಗನ ಇನ್ಸೈಡ್ ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ ಎನ್ನುವಂತಿದೆ.
ಆಯಸಿಡ್ ದಾಳಿ ನಡೆಸಿ ತಮಿಳುನಾಡಿಗೆ ಹೋದವನು ಅಲ್ಲಿ ನಾಟಕ ಶುರು ಮಾಡಿದ್ದ. ಆಶ್ರಮವೊಂದಕ್ಕೆ ಸೇರಿಕೊಂಡಿದ್ದ ನಾಗೇಶ್, ತುಂಬಾ ಒಳ್ಳೆಯವನಂತೆ ಎಲ್ಲರ ಎದುರು ನಟಿಸಿ ನಂಬಿಸಿದ್ದ. ನಾನೊಬ್ಬ ಅನಾಥ. ಈ ಅನಾಥ ಆಶ್ರಮದಲ್ಲಿ ಏನು ಕೆಲಸ ಬೇಕಾದರೂ ಮಾಡುತ್ತೇನೆ ಅಂತಾ ಭಾವನಾತ್ಮಕ ಡೈಲಾಗ್ ಹೊಡೆದು ಆಶ್ರಮ ಸೇರಿಕೊಂಡಿದ್ದ.
ಪ್ರತಿ ದಿನವು ಒಳ್ಳೆಯವನಂತೆ ಎಲ್ಲರ ಜತೆಯಲ್ಲೂ ಇರುತ್ತಿದ್ದ. ಅಶ್ರಮದಲ್ಲಿದ್ದ ಎಲ್ಲರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿದ್ದ. ಬರೋಬ್ಬರಿ 15 ದಿನಗಳತ ತಿರುವಣ್ಣಾಮಲೈನ ರಮಣರ್ ಆಶ್ರಮದಲ್ಲಿ ಆರೋಪಿ ನಾಗೇಶ್ ಕಾಲ ಕಳೆದಿದ್ದ. ಕಾವಿ ತೊಟ್ಟು ಸನ್ಯಾಸಿಯಂತೆ ನಾಟಕವಾಡಿ ಅಲ್ಲಿದ್ದವರ ನಂಬಿಕೆಯನ್ನು ಗಳಿಸಿದ್ದ.
ಎಲ್ಲರಂತೆ ಪ್ರತಿದಿನ ಆಶ್ರಮದಲ್ಲಿ ಧ್ಯಾನ, ಜಪ-ತಪ ಮಾಡಿಕೊಂಡಿದಿದ್ದ. ಮೊದಲೇ ದೌವ ಭಕ್ತನಾಗಿದ್ದ ನಾಗೇಶ್ಗೆ ಇದು ಸುಲಭವಾಗಿತ್ತು. ನಾಗನನ್ನು ಬಂಧಿಸುವುದಕ್ಕೆ ಹೋದಾಗಲೂ ಆಶ್ರಮದಲ್ಲಿದ್ದ ನಾಗ ತುಂಬಾ ಒಳ್ಳೆಯವನು ಎಂದು ಅಲ್ಲಿದ್ದವರು ಪೊಲೀಸರಿಗೆ ಹೇಳಿದ್ದಾರೆ. ಇದನ್ನು ಕೇಳಿದ ಪೊಲೀಸರು ಒಂದು ಕ್ಷಣ ಹುಬ್ಬೇರಿಸಿದ್ದಾರೆ.
ವಾಂಟೆಡ್ ಫೋಟೋ ತೋರಿಸಿದಾಗಲೂ ಇವನು ಅವನಲ್ಲ, ಈತ ಆ ರೀತಿಯಲ್ಲ ಎಂದು ಆಶ್ರಮದಲ್ಲಿದ್ದವರು ಹೇಳಿದ್ದರಂತೆ. ಅಷ್ಟರ ಮಟ್ಟಿಗೆ ನಾಗೇಶ್ ಆಶ್ರಮದಲ್ಲಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಆದರೆ, ಕೊನೆಯಲ್ಲಿ ಆರೋಪಿಯ ಬಂಡವಾಳ ಬಯಲಾದಾಗ ಆಶ್ರಮದಲ್ಲಿ ಇದ್ದವರು ಕೂಡ ಶಾಕ್ ಆಗಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ವಿಚಾರಣ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada