ಹೊಸದಿಲ್ಲಿ : ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಹಿಡಿತ ಸಾಧಿಸಿದ ನಂತರ ಪ್ರಥಮ ಬಾರಿಗೆ ಅಲ್ಲಿಗೆ ಭಾರತದ ಹಿರಿಯ ರಾಜತಾಂತ್ರಿಕರ ನಿಯೋಗ ಭೇಟಿ ನೀಡಲಿದೆಯೆಂದು ಭಾರತ ಸರಕಾರ ತಿಳಿಸಿದೆ. ತಾಲಿಬಾನಿ ಸರಕಾರದ ಸದಸ್ಯರೊಂದಿಗೆ ಈ ನಿಯೋಗ ಮಾತುಕತೆ ನಡೆಸಿ ಯುದ್ಧದಿಂದ ಕಂಗೆಟ್ಟಿರುವ ಹಾಗೂ ಬರಗಾಲ ಪೀಡಿತ ದೇಶಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಒದಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಹಿಂದಿನ ಅಫ್ಗಾನ್ ಸರಕಾರ ಪತನಗೊಂಡು ತಾಲಿಬಾನಿಗಳು ಇಡೀ ದೇಶದ ಮೇಲೆ ಆಗಸ್ಟ್ 2021ರಲ್ಲಿ ಹಿಡಿತ ಸಾಧಿಸಿದ ನಂತರ ಭಾರತ ಅಫ್ಗಾನಿಸ್ತಾನದಲ್ಲಿನ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತ್ತು.
ಭಾರತ ಸರಕಾರವು ತಾಲಿಬಾನಿ ನಾಯಕತ್ವದ ಜತೆ ದೋಹಾ ಮತ್ತು ಮಾಸ್ಕೋದಲ್ಲಿ ಒಂದೆರಡು ಮಾಡಿ ಸಂಪರ್ಕ ಸಾಧಿಸಿದ್ದರೂ ತಾಲಿಬಾನಿ ಆಡಳಿತದ ಸಂದರ್ಭ ಭಾರತೀಯ ಅಧಿಕಾರಿಗಳ ನಿಯೋಗವೊಂದು ಅಫ್ಗಾನಿಸ್ತಾನಕ್ಕೆ ಭೇಟಿ ನೀಡಲಿರುವುದು ಇದೇ ಮೊದಲ ಬಾರಿ ಆಗಿದೆ.
“ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡವೊಂದು ಕಾಬೂಲ್ಗೆ ಭೇಟಿ ನೀಡಿ ಆ ದೇಶಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ನೀಡುವ ಕುರಿತಂತೆ ಪರಿಶೀಲಿಸಲಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಇಲ್ಲಿಯ ತನಕ ಭಾರತವು ಅಫ್ಗಾನಿಸ್ತಾನಕ್ಕೆ 20,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕ್ ಮಾರ್ಗದ ಮೂಲಕ ಸಾಗಿಸಿದೆ. ಕೋವಿಡ್ ಲಸಿಕೆಯನ್ನೂ ಭಾರತ ಅಫ್ಗಾನಿಸ್ತಾನಕ್ಕೆ ಒದಗಿಸಿದೆ. ಇರಾನ್ನಲ್ಲಿರುವ ಅಫ್ಗಾನ್ ನಿರಾಶ್ರಿತರಿಗೂ ಲಸಿಕೆ ನೀಡಲು ಭಾರತ ಇರಾನ್ಗೂ ಲಸಿಕೆ ಒದಗಿಸಿದೆ.
ಕಾಬೂಲ್ಗೆ ಭೇಟಿ ನೀಡಲಿರುವ ಭಾರತೀಯ ಅಧಿಕಾರಿಗಳ ತಂಡವು ಅಲ್ಲಿನ ಅಂತರಾಷ್ಟ್ರೀಯ ಸಂಘಟನೆಗಳನ್ನೂ ಸಂಪರ್ಕಿಸಲಿದೆ ಹಾಗೂ ಭಾರತೀಯ ಯೋಜನೆಗಳು ಜಾರಿಯಾಗುತ್ತಿರುವ ಸ್ಥಳಗಳಿಗೆ ಭೇಟಿ ನೀಡಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada