ಜೈಪುರ: ಪ್ರವಾದಿ ಮುಹಮ್ಮದ್ ಬಗ್ಗೆ ಕಾಮೆಂಟ್ ಮಾಡಿ ದೇಶಾದ್ಯಂತ ಮಾತ್ರವಲ್ಲದೆ, ಗಲ್ಫ್ ರಾಷ್ಟ್ರಗಳಲ್ಲೂ ಆಕ್ರೋಶದ ಕಿಡಿ ಹೊತ್ತಿಸಿ, ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರ ತಲೆ ಕಡಿದವರಿಗೆ ಮನೆ ಉಡುಗೊರೆ ನೀಡುವುದಾಗಿ ಕ್ಯಾಮೆರಾ ಮುಂದೆಯೇ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ರಾಜಸ್ಥಾನದ ಅಜ್ಮೇರ್ ದರ್ಗಾದ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ತುಣುಕೊಂದು ವೈರಲ್ ಆದ ಬೆನ್ನಲ್ಲೇ ರಾಜಸ್ಥಾನ ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದರು. ಇದೀಗ ಆರೋಪಿ ಸಲ್ಮಾನ್ ಚಿಸ್ತಿಯನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ವಿಡಿಯೋದಲ್ಲಿ ಆರೋಪಿ ಸಲ್ಮಾನ್, ನೂಪುರ್ ಶರ್ಮಾ ತಲೆಯನ್ನು ಕಡಿದು ತಂದವರಿಗೆ ಮನೆ ಕೊಡುವುದಾಗಿ ಆಫರ್ ಮಾಡಿದ್ದ. ಅಲ್ಲದೆ, ಪ್ರವಾದಿಯನ್ನು ಅವಹೇಳನ ಮಾಡಿದ್ದಕ್ಕಾಗಿ ಆಕೆಯನ್ನು ಗುಂಡಿಕ್ಕಿ ಸಾಯಿಸುವುದಾಗಿಯೂ ವಿಡಿಯೋದಲ್ಲಿ ಹೇಳಿದ್ದಾನೆ. ನೀನು ಎಲ್ಲ ಮುಸ್ಲಿಂ ದೇಶಗಳಿಗೆ ಪ್ರತಿಕ್ರಿಯೆ ನೀಡಲೇಬೇಕು. ನಾನಿದನ್ನು ರಾಜಸ್ಥಾನದ ಅಜ್ಮೇರ್ನಿಂದ ಹೇಳುತ್ತಿದ್ದೇನೆ. ಈ ಸಂದೇಶವು ಹುಜೂರ್ ಖ್ವಾಜಾ ಬಾಬಾ ಕಾ ದರ್ಬಾರ್ನಿಂದ ಬಂದಿದೆ ಎಂದು ಸಲ್ಮಾನ್ ಹೇಳಿದ್ದಾನೆ.
ಆರೋಪಿ ಸಲ್ಮಾನ್, ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿದ್ದಾರೆ. ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿಯು ಸಹ ವೈರಲ್ ವಿಡಿಯೋವನ್ನು ಖಂಡಿಸಿದೆ ಮತ್ತು ದೇಗುಲವು ಕೋಮು ಸೌಹಾರ್ದತೆಯ ಸ್ಥಳವಾಗಿದೆ ಎಂದು ಹೇಳಿದೆ. ವಿಡಿಯೋದಲ್ಲಿ ಸಲ್ಮಾನ್ ಹೇಳಿರುವ ಮಾತಿಗೂ ನಮಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅದನ್ನು ಖಂಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನೂಪುರ್ ಶರ್ಮಾ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಅನ್ಯ ಧರ್ಮದ ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ರಾಜಸ್ಥಾನದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಅನಾಹುತಗಳು ಸಂಬಂಧಿಸುತ್ತಿದ್ದು, ಜಾಲತಾಣಗಳ ಮೇಲೆ ಕಡಿವಾಣ ಹಾಕಲೇಬೇಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada