ನವದೆಹಲಿ : ಗರ್ವಾಲ್ ಹಿಮಾಲಯದಲ್ಲಿ ವಾರ್ಷಿಕ ನಡೆಯುವ ಅತ್ಯಂತ ಜನಪ್ರಿಯ ತೀರ್ಥಯಾತ್ರೆಗಳಲ್ಲಿ ಒಂದಾದ ಚಾರ್ ಧಾಮ್ ಯಾತ್ರೆ ಈ ವರ್ಷ ದಾಖಲೆ ಸಂಖ್ಯೆಯ ಭಕ್ತರನ್ನು ಸೆಳೆಯಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ ಐಯೊಂದಿಗೆ ಮಾತನಾಡಿದ ಧಾಮಿ, ಉತ್ತರಾಖಂಡ ಸರ್ಕಾರವು ಅದ್ಧೂರಿಯಾಗಿ ಮಾಡಬೇಕಾದ ಯಾತ್ರೆಯ ಸಿದ್ಧತೆಗಳತ್ತ ಗಮನ ಹರಿಸಲಿದೆ. ಕಳೆದ ವರ್ಷ ನಡೆದ ಚಾರ್ ಧಾಮ್ ಯಾತ್ರೆಯಲ್ಲಿ ಬಹಳಷ್ಟು ಭಕ್ತರು ಭಾಗವಹಿಸಿದ್ದಾರೆ. ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದಿದ್ದಾರೆ.
ಈ ವರ್ಷ, ನಾವು ನಮ್ಮ ಸಿದ್ಧತೆಗಳನ್ನು ಮೊದಲೇ ಮಾಡುತ್ತಿದ್ದೇವೆ. ಭಕ್ತಾದಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಯಾತ್ರೆಯನ್ನು ಸುರಕ್ಷಿತ, ಸುಲಭ ಮತ್ತು ಆರಾಮದಾಯಕವಾಗಿಸಬೇಕು. ಬಾಬಾ ಬದ್ರಿ ವಿಶಾಲ್ ಅವರ ಆಶೀರ್ವಾದದೊಂದಿಗೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಧಾಮಿ ಹೇಳಿದ್ದಾರೆ.
ಚಾರ್ ಧಾಮ್ ಯಾತ್ರೆ ಆರಂಭವಾಗಲು ಇನ್ನು 100 ದಿನಗಳು ಮಾತ್ರ ಬಾಕಿ ಉಳಿದಿವೆ. ನಮ್ಮ ಯಾತ್ರೆಯು ಈ ವರ್ಷ ದಾಖಲೆ ಮುರಿಯಲಿದೆ. ಅದಕ್ಕಾಗಿ ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯದ ಪವಿತ್ರ ದ್ವಾರಗಳು ಏ. 27 ರಂದು ತೆರೆಯಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
https://play.google.com/store/apps/details?id=com.speed.newskannada