ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಆಗಾಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಆರ್ಡಿಪಿಆರ್ ಸಚಿವ ಕೆಎಸ್ ಈಶ್ವರಪ್ಪ ಅವರು ಭಾನುವಾರ ಅನಿರೀಕ್ಷಿತ ಪ್ರಸ್ತಾಪವನ್ನು ಮುಂದಿಟ್ಟಿದ್ದು, ತಮ್ಮ ಈ ಆಗ್ರಹದಿಂದ ಎಲ್ಲರ ಹುಬ್ಬೇರುವಂತೆ ಮಾಡಿದೆ.ಯಡಿಯೂರಪ್ಪ ಅವರು ಜಿಲ್ಲೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವಂತೆ ಈಶ್ವರಪ್ಪ ಅವರು ಆಗ್ರಹಿಸಿದ್ದಾರೆ.ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರು ವಿಮಾನ ನಿಲ್ದಾಣಕ್ಕ ಕೆಳದಿ ಸಾಮ್ರಾಜ್ಯವನ್ನು ಆಳಿದ ರಾಜಾರಾಂ ಅವರಿಗೆ ಆಶ್ರಯ ನೀಡಿದ ರಾಣಿ ಕೆಳದಿ ಚೆನ್ನಮ್ಮ ಅವರ ಹೆಸರಿಡುವಂತೆ ಸಲಹೆ ನೀಡಿದರು.ಸಾಹಿತಿ ಗೊರೂರು ಚನ್ನಬಸಪ್ಪ ಅವರು ಮಾತನಾಡಿ, ತಮ್ಮ ಆಳ್ವಿಕೆಯಲ್ಲಿ ತಮ್ಮ ರಾಜ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತಂದ ಶಿವಪ್ಪ ನಾಯಕ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವಂತೆ ಸಲಹೆ ನೀಡಿದರು.ಈ ಮಧ್ಯೆ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಅವರಂತಹ ನಾಯಕರನ್ನು ಪಡೆದ ಜಿಲ್ಲೆಯ ಜನತೆ ಅದೃಷ್ಟವಂತರು. ‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ವಿಮಾನ ನಿಲ್ದಾಣಕ್ಕೆ ಹೆಸರಿಡಲು ಹಲವು ಹೆಸರುಗಳನ್ನು ಸೂಚಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರನ್ನು ಏಕೆ ಇಡಬಾರದು? ಎಂದು ಪ್ರಶ್ನಿಸಿದರು.ತಮ್ಮ ಈ ಪ್ರತಿಕ್ರಿಯೆಯನ್ನು ನಂತರವೂ ಈಶ್ವರಪ್ಪ ಅವರು ಸಮರ್ಥಿಸಿಕೊಂಡರು, 10, 50 ಮತ್ತು 100 ವರ್ಷಗಳ ಬಳಿಕ ವಿವಿಧ ರಾಜ್ಯಗಳು ಹಾಗೂ ದೇಶಗಳಿಂದ ಬಂದವರು ಇಲ್ಲಿನ ಜನರ ಬಳಿ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನೇಕೆ ಇಡಲಾಯಿತು ಎಂದು ಪ್ರಶ್ನಿಸಿದರೆ ಏನು ಹೇಳುತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದಕ್ಕೆ ಯಾವುದೇ ಉತ್ತರ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ ಯಡಿಯೂರಪ್ಪ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ತಪ್ಪೇ? ನನ್ನ ಈ ಸಲಹೆಯಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತವೆ ಎಂಬುದು ನನಗೆ ಗೊತ್ತಿದೆ. ಇಂತಹ ಟೀಕೆಗಳನ್ನು ನಾನಾಗಲೀ ಯಡಿಯೂರಪ್ಪ ಆಗಲೀ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಬೆಳೆದಷ್ಟು ಜನರು ನಮ್ಮನ್ನು ಟೀಕಿಸುತ್ತಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗದೇ ಹೋಗಿದ್ದರೆ ಜಿಲ್ಲೆಗೆ ವಿಮಾನ ನಿಲ್ದಾಣ ಬರುವುದು ಕನಸಾಗಿಯೇ ಉಳಿಯುತ್ತಿತ್ತು. ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರುವುದು ಸೂಕ್ತ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada