ಬೆಂಗಳೂರು,ಮೇ5- ಪ್ರಧಾನಿ ನರೇಂದ್ರಮೋದಿ ಅವರು ವಿದೇಶ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ನಡೆಯಲಿದ್ದು, ಮೇ 2ನೇ ವಾರ ಸಂಪುಟ ಪುನಾರಚನೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮೇ 11ರಂದು ಸಂಪುಟ ಸಭೆ ನಿಗದಿಯಾಗಿದೆ.ಸಂಪುಟ ಪುನಾರಚನೆ ಸಂಬಂಧ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು.
ಸಿಎಂ ಬೊಮ್ಮಾಯಿ ಅವರ ಜೊತೆ ಯಾರ್ಯಾರನ್ನು ಕೈ ಬಿಡಬೇಕು ಮತ್ತು ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನಾಳೆ ಪ್ರಧಾನಿ ದೇಶಕ್ಕೆ ಮರಳುತ್ತಿದ್ದು, ಬಳಿಕ ಮೇ 2ನೇ ವಾರದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ದೆಹಲಿಯಲ್ಲೇ ಹೈಕಮಾಂಡ್ ನಾಯಕರು ಮಹತ್ವದ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಹೀಗಾಗಿ ಮೇ 10ರ ಮೊದಲು ನೂತನ ಸಚಿವರ ಪ್ರಮಾಣ ವಚನವು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದರೆ ದೊಡ್ಡ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಖಾಲಿ ಇರುವುದು ಕೇವಲ ಐದು ಸ್ಥಾನ. ಆದರೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತಿದೆ.ಸಂಪುಟ ಪುನಾರಚನೆ ಬದಲು ಕೇವಲ ವಿಸ್ತರಣೆಯಾದರೆ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ಬಿ.ವೈ.ವಿಜಯೇಂದ್ರ ಅವರುಗಳನ್ನು ಸೇರಿಸಿಕೊಂಡು ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಬಾರಿ ಚುನಾವಣಾ ಸಂಪುಟ ರಚನೆಯಾಗಲಿದೆ. ಇದಕ್ಕಾಗಿ ಎರಡು ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ಮುಖ್ಯಮಂತ್ರಿ ಬದಲಾಯಿಸಿ ಸಂಪೂರ್ಣ ಸಂಪುಟ ಪುನಾರಚನೆ ಮಾಡುವುದು. ಮತ್ತೊಂದು ಮುಖ್ಯಮಂತ್ರಿಯನ್ನು ಉಳಿಸಿಕೊಂಡು ಕೆಲವರನ್ನು ಕೈಬಿಟ್ಟು ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳುವುದಾಗಿದೆ.
ಇವೆರಡೂ ಬೇಡ ಅನ್ನಿಸಿದಲ್ಲಿ ಖಾಲಿ ಇರುವ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನ ಭರ್ತಿ ಮಾಡಿ, ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.ಸಂಪುಟ ಪುನಾರಚನೆಯಾದರೆ ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್, ವಸತಿ ಸಚಿವ ವಿ.ಸೋಮಣ್ಣ, ಮುಜರಾಯಿ ಮತ್ತು ವಕ್ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಬಿಬಿಎಂಪಿ ಚುನಾವಣೆ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿದು ಬಂದಿದೆ.ಇನ್ನೂ ಸುಧಾಕರ್ ಅವರ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಿರುವುದರ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.ಇನ್ನೂ ಇತ್ತೀಚೆಗಷ್ಟೆ ಸಚಿವ ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬ ಹೇಳಿಕೆ ನೀಡಿದ್ದರು ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ ಎಂಟಿಬಿ ನಾಗರಾಜ್ ಬೆಲೆ ತೆತ್ತಲಿದ್ದಾರೆ.
ಪಿ. ರಾಜೀವ್, ರಾಜುಗೌಡ, ಪ್ರೀತಂ ಗೌಡ, ಪೂರ್ಣಿಮಾ ಶ್ರೀನಿವಾಸ್, ಎನ್ ಮಹೇಶ್, ಅರವಿಂದ್ ಬೆಲ್ಲದ್, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರ ಕೆಲವು ನಾಯಕರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ.ವಿಶೇಷವಾಗಿ ಗೃಹ ಖಾತೆಯ ಪುನಾರಚನೆಯೂ ಆಗುವ ಸಾಧ್ಯತೆಯಿದ್ದು, ಕೆಲವು ಸಂದರ್ಭಗಳನ್ನು ಸೂಕ್ಷ್ಮವಾಗಿ ನಿಭಾಯಿಸಬಲ್ಲ ಶಾಸಕರಿಗೆ ಈ ಖಾತೆಯನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆರ್ಡಿಪಿಆರ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಆಯಾ ನಾಯಕರಿಗೆ ಡಿಸಿಎಂ ಹುದ್ದೆ ರಚಿಸಲು ಪಕ್ಷದ ಕಾರ್ಯಕರ್ತರಿಂದ ಬೇಡಿಕೆಯಿದೆ, ಆದರೆ ಹೈಕಮಾಂಡ್ ಈ ಬಗ್ಗೆ ಗಮನಹರಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.
# ಸಂಪುಟದಲ್ಲಿ ಯಾರಿಗೆ ಅವಕಾಶ?:
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಬೆಳಗಾವಿ ರಮೇಶ್ ಜಾರಕಿಹೊಳಿಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಕುಡುಚಿ ಶಾಸಕ ಪಿ.ರಾಜೀವ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸುರಪುರ ಶಾಸಕ ರಾಜೂಗೌಡ, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada