ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ಅವರನ್ನ ಬಂಧಿಸಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಿಎಸ್ಐ ನೇಮಕಾರಿ ಅಕ್ರಮದಲ್ಲಿ 300 ಕೋಟಿ ರೂ.
ವ್ಯವಹಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಯಾವ ಲೆಕ್ಕದಲ್ಲಿ 300 ಕೋಟಿ ರೂ. ಅಂದರೋ ಗೊತ್ತಿಲ್ಲ. ಆದರೆ ಅವರು ರಾಜ್ಯ ಆಳಿದವರು. ಅವರಿಗೆ ಅವರದ್ದೇ ಆದ ಮಾಹಿತಿ-ಲೆಕ್ಕಚಾರ ಇರುತ್ತದೆ. ನಮ್ಮ ಪಟ್ಟಿ ಬೇರೆಯೇ ಇದೆ. ನಾಳೆ ಎಲ್ಲವನ್ನೂ ಹೇಳುತ್ತೇವೆ. ಮಲ್ಲೇಶ್ವರಂನಲ್ಲಿ ಒಂದು ಪಿಎಸ್ಐ ಪೋಸ್ಟ್ ಮಾಡಿಸಿದ್ದೂ ಇದರಲ್ಲಿ ಇದೆ ಎನ್ನುವ ಮೂಲಕ ಮತ್ತಷ್ಟು ಸಂಚಲನ ಮೂಡಿಸಿದ್ದಾರೆ.
ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಈ ಬಗ್ಗೆ ನಾಳೆ(ಮಂಗಳವಾರ) ಪತ್ರಿಕಾಗೋಷ್ಠಿ ಮಾಡಿ ವಿವರವಾಗಿ ಹೇಳುತ್ತೇವೆ. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಅಂತಾ ಸದನದಲ್ಲಿ ಗೃಹ ಸಚಿವರು ಹೇಳಿದ್ದಾರೆ. ಪಿಎಸ್ಐ ಮಾತ್ರ ಅಲ್ಲ, BWSSB ಸೇರಿದಂತೆ ಎಲ್ಲ ನೇಮಕಾತಿಯಲ್ಲೂ ತನಿಖೆ ಆಗಬೇಕು. ಗೃಹ ಸಚಿವರು ಈ ಪ್ರಕರಣವನ್ನ ತಪ್ಪು ದಾರಿಗೆ ಎಳೆದರು. ಮಾಗಡಿಯ ಯಾರನ್ನು ಅರೆಸ್ಟ್ ಮಾಡಿದ್ದೀರಾ? ಯಾವ ಮಂತ್ರಿ ಒತ್ತಡ ಹಾಕಿದ್ದರು? ಎಂದು ಪ್ರಶ್ನಿಸುತ್ತಾ ಪರೋಕ್ಷವಾಗಿ ಅಶ್ವಥ್ ನಾರಾಯಣ್ಗೆ ಡಿಕೆಶಿ ಟಾಂಗ್ ಕೊಟ್ಟರು. ಯಾರ ಒತ್ತಡ ಇತ್ತು ಎಂದು ಗೃಹ ಸಚಿವರು ಇಂದು ಸಂಜೆಯೊಳಗೆ ಬಹಿರಂಗ ಪಡಿಸಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. PSI ನೇಮಕಾತಿ ಹಗರಣದಲ್ಲಿ ADGP ಅಮೃತಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈಗ ಏನು ಹೇಳುತ್ತಾರೆ? PSI ನೇಮಕಾತಿ ಹಗರಣದಲ್ಲಿ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಜಾರಿಕೊಳ್ಳುವುದು ಬೇಡ. ಈ ಹಗರಣಕ್ಕೆ ಅಧಿಕಾರಿಗಳಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಕಾರಣ. ಅವರನ್ನ ಸಂಪುಟದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಡಿಕೆಶಿ ಮತ್ತು ಸಿದ್ದು ನಾಳೆ ನಡೆಸುವ ಜಂಟಿ ಸುದ್ದಿಗೋಷ್ಠಿ ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada