ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ನ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿರುವ ಮನೆ ಬಿರುಕು ಬಿಟ್ಟಿದೆ ಎನ್ನುವ ಸುದ್ದಿಗೆ ಆತಂಕಗೊಂಡ ಸುತ್ತಮುತ್ತಲಿನ ಮನೆಯವರು ಅಪಾರ್ಟ್ಮೆಂಟ್ನಿಂದ ಹೊರಗೆ ಓಡಿ ಬಂದ ಘಟನೆ ಶನಿವಾರ ನಡೆದಿದೆ.
‘ಅಪಾರ್ಟ್ಮೆಂಟ್ ಬಿರುಕು ಬಿಟ್ಟಿದೆ, ಯಾವುದೇ ಕ್ಷಣದಲ್ಲಿ ಬೀಳಬಹುದು’ ಎನ್ನುವ ಸುದ್ದಿ ಹರಿದಾಡಿತ್ತು. ಕೆಲಹೊತ್ತು ಅಲ್ಲಿ ಆತಂಕದ ವಾತಾವರಣ ಸಹ ನಿರ್ಮಾಣವಾಗಿತ್ತು,. ಕೆಲವರು ಬಟ್ಟೆ, ಬ್ಯಾಗ್ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೊರಗೆ ಓಡಿ ಬಂದಿದ್ದರು.
ವಿಷಯ ತಿಳಿಯುತ್ತಿದ್ದಂತೆ ಎಂಜಿನಿಯರ್ ಅಪಾರ್ಟ್ಮೆಂಟ್ಗೆ ತೆರಳಿ ಪರಿಶೀಲಿಸಿದರು. ನೆಲಕ್ಕೆ ಹಾಕಿದ್ದ ಟೈಲ್ಸ್ ಮೇಲ್ಮುಖವಾಗಿ ಸೀಳು ಬಿಟ್ಟಿರುವುದನ್ನು ಗಮನಿಸಿದ ಅವರು ‘ಸಾಮಾನ್ಯವಾಗಿ ಟೈಲ್ಸ್ ಏರ್ ಬ್ಲಾಕ್ನಿಂದ ಒಡೆಯುತ್ತದೆ. ಆತಂಕ ಪಡುವಂತಹದ್ದೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಮನೆಯ ಟೈಲ್ಸ್ ಒಡೆದಿರುವ ದೃಶ್ಯಾವಳಿಗಳನ್ನು ಮಾಧ್ಯಮದವರಿಗೆ ಯಾರೊ ಕಳುಹಿಸಿದ್ದಾರೆ. ಆ ವಿಡಿಯೊ ಎಲ್ಲೆಡೆ ಹರಿದಾಡಿದೆ. ಮನೆ ಬಿರುಕು ಬಿಟ್ಟಿದೆ ಎನ್ನಲಾದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಈ ವಿಷಯವೇ ಗೊತ್ತಿಲ್ಲ. ಗಾಳಿ ಸುದ್ದಿಯಿಂದಾಗಿ ನಾವೆಲ್ಲ ಆತಂಕ ಪಡುವಂತಾಯಿತು ಎಂದು ಸುತ್ತಮುತ್ತಲಿನ ನಿವಾಸಿಗಳು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada