ಪುನೀತ್ ರಾಜ್ಕುಮಾರ್ ಅಗಲಿ ಎರಡು ತಿಂಗಳಿಗೂ ಹೆಚ್ಚು ಕಾಲವಾಯಿತು. ಆದರೆ ಜನರಿಗೆ ಅಪ್ಪು ಮೇಲಿನ ಪ್ರೀತಿ, ಅಭಿಮಾನ ತುಸುವೂ ಕಡಿಮೆ ಆಗಿಲ್ಲ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಹುಟ್ಟುಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಈ ಸಮಯದಲ್ಲಿ ಪುನೀತ್ ಗೌರವಾರ್ಥ ಎಲ್ಲ ಲೈಟ್ಗಳನ್ನು ಆಫ್ ಮಾಡಿ ಮೊಬೈಲ್ ಟಾರ್ಚ್ ಆನ್ ಮಾಡಿ ಅಪ್ಪುಗೆ ನಮನ ಸಲ್ಲಿಸಲಾಯಿತು.
ಭವಾನಿ ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು, ಕ್ರೀಡಾಪ್ರೇಮಿಗಳು, ಕ್ರೀಡಾಪಟುಗಳು ತಮ್ಮ ತಮ್ಮ ಮೊಬೈಲ್ ಟಾರ್ಚ್ ಏಕಕಾಲಕ್ಕೆ ಹೊತ್ತಿಸಿ ಪುನೀತ್ ರಾಜ್ಕುಮಾರ್ಗೆ ಗೌರವ ಸಲ್ಲಿಸಿದರು. ಪುನೀತ್ ರಾಜ್ಕುಮಾರ್ ಪರ ಘೋಷಣೆಗಳನ್ನು ಸಹ ಕೂಗಲಾಯಿತು.
ಚಿಕ್ಕೋಡಿಯಲ್ಲಿ ಜೋಡಿಯೊಂದು ಪುನೀತ್ ರಾಜ್ಕುಮಾರ್ ಭಾವಚಿತ್ರದ ಮುಂದೆ ವಿವಾಹವಾಗಿ ತಮ್ಮ ಅಪ್ಪು ಅಭಿಮಾನವನ್ನು ಮೆರೆದಿದ್ದಾರೆ. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಹೇಗಾದರು ಮಾಡಿ ಪುನೀತ್ ರಾಜ್ಕುಮಾರ್ ಅವರಿಗೆ ತಲುಪಿಸಬೇಕು ಎಂದು ಕೊಂಡಿತ್ತಂತೆ ಈ ಜೋಡಿ. ಆದರೇ ಅದಷ್ಟರಲ್ಲಿ ಪುನೀತ್ ಎಲ್ಲರನ್ನು ಅಗಲಿ ಇಹ ಲೋಕ ತ್ಯಜಿಸಿದ್ದಾರೆ. ಇದೇ ದುಖಃದಲ್ಲಿದ್ದ ಈ ಜೋಡಿ ಜನವರಿ 02ರಂದು ವಿವಾಹವಾಗಿದ್ದಾರೆ.
ಕೆಲವು ದಿನದ ಹಿಂದಷ್ಟೆ ಗೋಕಾಕ್ನಲ್ಲಿ ಅಪ್ಪು ಅಭಿಮಾನಿಯೊಬ್ಬರು ತಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆ ಮಾಡಿದ ಹೋಮದಲ್ಲಿ ಪುನೀತ್ ರಾಜ್ಕುಮಾರ್ ಚಿತ್ರವನ್ನು ಇಟ್ಟು ಅಭಿಮಾನ ಮೆರೆದಿದ್ದರು.
ಪುನೀತ್ ಭಾವ ಚಿತ್ರ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಮಾಡುವ ಚಿತ್ರಗಳು ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಈಗಲೂ ಸಹ ಪುನೀತ್ ರಾಜ್ಕುಮಾರ್ ಸಮಾಧಿಗೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಸಮಾಧಿಗೆ ಪೂಜೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಅಪ್ಪುಗೆ ಗೌರವ ಸಲ್ಲಿಸಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಮೂಲಕ ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada