ದುಬೈ: ಶ್ರೀಲಂಕಾ ಬ್ಯಾಟಿಂಗ್ ಬಳಗವನ್ನು ದೂಳೀಪಟ ಮಾಡಿದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಈ ಮೂಲಕ ಎಂಟನೇ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು.
ಎದುರಾಳಿಗಳನ್ನು 106 ರನ್ಗಳಿಗೆ ನಿಯಂತ್ರಿಸಿದ ಭಾರತದ ಬೌಲರ್ಗಳು ಜಯದ ರೂವಾರಿಗಳಾದರು.
32 ಓವರ್ಗಳಲ್ಲಿ 102 ರನ್ಗಳ ಪರಿಷ್ಕೃತ ಗುರಿಯನ್ನು ಭಾರತ 21.3 ಓವರ್ಗಳಲ್ಲಿ ಯಶಸ್ವಿಯಾಗಿ ದಾಟಿತು.
ತಂಡದ ಮೊತ್ತ ಎಂಟು ರನ್ ಆಗಿದ್ದಾಗ ಹರ್ನೂರ್ ಸಿಂಗ್ ವಿಕೆಟ್ ಕಳೆದುಕೊಂಡರು. ಅವರು ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ. ಅವರು ಔಟಾದ ನಂತರ ಅಂಕೃಷ್ ರಘುವಂಶಿ ಮತ್ತು ಶೇಕ್ ರಶೀದ್ ಅವರ ಜೊತೆಯಾಟ ರಂಗೇರಿತು. 96 ರನ್ಗಳ ಜೊತೆಯಾಟವಾಡಿದ ಇವರಿಬ್ಬರು ಎದುರಾಳಿ ತಂಡದ ಬೌಲರ್ಗಳನ್ನು ಕಾಡಿದರು.
ಅಂಕೃಷ್ ತಾಳ್ಮೆಯ ಬ್ಯಾಟಿಂಗ್ ಮೂಲಕ 67 ಎಸೆತಗಳಲ್ಲಿ 56 ರನ್ ಗಳಿಸಿದರೆ ಶೇಕ್ 49 ಎಸೆತಗಳಲ್ಲಿ 31 ರನ್ ಗಳಿಸಿ ಸುಲಭ ಜಯಕ್ಕೆ ಕಾಣಿಕೆ ನೀಡಿದರು.
ಹಿಂದಿನ ಪಂದ್ಯಗಳಲ್ಲಿ ಮಿಂಚಲು ವಿಫಲರಾಗಿದ್ದ ಅಂಕೃಷ್ ಈ ಪಂದ್ಯದಲ್ಲಿ ಆತ್ಮವಿಶ್ವಾಸದಲ್ಲಿ ಆಡಿದರು. ಬ್ಯಾಕ್ಫುಟ್ ಪಂಚ್ಗಳ ಮೂಲಕ ಆರಂಭದಲ್ಲೇ ಸುಲಭವಾಗಿ ರನ್ ಕಲೆ ಹಾಕಿದ ಅವರು ವೇಗದ ಬೌಲರ್ಗಳನ್ನೂ ಸ್ಪಿನ್ನರ್ಗಳನ್ನೂ ದಿಟ್ಟವಾಗಿ ಎದುರಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 19 ವರ್ಷದೊಳಗಿನ ತಂಡ 33 ಓವರ್ಗಳಲ್ಲಿ 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಿತು. ಎರಡು ತಾಸುಗಳಿಗೂ ಹೆಚ್ಚು ಸಮಯ ಪಂದ್ಯ ಸ್ಥಗಿತಗೊಳಿಸಲಾಯಿತು. ನಂತರ ಪಂದ್ಯವನ್ನು 38 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ರಾಜ್ಯವರ್ಧನ್ ಹಂಗರೇಕರ್ ಮತ್ತು ರವಿ ಕುಮಾರ್ ಭಾರತದ ಬೌಲಿಂಗ್ ವಿಭಾಗದಲ್ಲಿ ಮಿಂಚಿದರು. ಓಸ್ತವಾಲ್ ಕೂಡ ಅತ್ಯುತ್ತಮ ಕಾಣಿಕೆ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: