ಚಿಕ್ಕಮಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ವಿಲೀನ ಮಾಡುವ ಆಲೋಚನೆ ಇದೆ. ಉರ್ದು, ಕನ್ನಡ, ಇಂಗ್ಲಿಷ್, ತಮಿಳು, ಮರಾಠಿ ಯಾವುದೇ ಶಾಲೆಯಾಗಿರಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ವಿಲೀನಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 3 ಸಾವಿರ ಶಾಲೆಗಳಿವೆ. ಶಿಕ್ಷಣ ಇಲಾಖೆ ತಜ್ಞರ ಸಲಹೆ ಮೇರೆಗೆ ಶಾಲೆಗಳ ಸ್ಥಿತಿಗತಿ ನೋಡಿಕೊಂಡು ಮುಂದುವರಿಯುತ್ತೇವೆ. ಪ್ರತಿವರ್ಷ ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಮರಾಠಿ ಮಕ್ಕಳು ಬಹಳಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಈಗ ಮರಾಠಿ ಮಾಧ್ಯಮದ ಮಕ್ಕಳೂ ಕಡಿಮೆಯಾಗಿದ್ದಾರೆ. ಯಾವ ಮಾಧ್ಯಮದಲ್ಲಿ ಓದಿದರೆ ಕೆಲಸ ಸಿಗುತ್ತದೆ ಎಂಬುದನ್ನು ನೋಡಿಕೊಂಡು ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಯಾವ ಶಾಲೆಗಳನ್ನೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 2,700ಕ್ಕೂ ಹೆಚ್ಚು ಸಿಂಗಲ್ ವಿಲೇಜ್ ಪಂಚಾಯಿತಿಗಳಿದ್ದು ಅಂಥ ಕಡೆ 5ರಿಂದ 7 ಶಾಲೆಗಳಿವೆ. ಕೆಲವೊಂದರಲ್ಲಿ 100 ವಿದ್ಯಾರ್ಥಿಗಳು ಮತ್ತೆ ಕೆಲವಲ್ಲಿ 20 ಮಕ್ಕಳಿದ್ದಾರೆ. ಇವೆಲ್ಲವೂ 300ರಿಂದ 800 ಮೀಟರ್ ಅಂತರದಲ್ಲಿದೆ. ಅಂತಹ ಶಾಲೆ ಮತ್ತು ಶಿಕ್ಷಕರನ್ನು ಒಗ್ಗೂಡಿಸಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಸರ್ಕಾರದ್ದಾಗಿದೆ. ಗುಣಾತ್ಮಕ ಶಿಕ್ಷಣ ನೀಡುವ ದೃಷ್ಟಿಯಿಂದ ಸಿಂಗಲ್ ಸ್ಕೂಲ್ ಮಾಡುವ ಆಲೋಚನೆಯಿದ್ದು ಮಾದರಿ ಶಾಲೆ ಕಲ್ಪನೆಯಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada