ಪಕ್ಷದ 13 ಶಾಸಕರು, ಮೂವರು ಸಂಸದರಿದ್ದರೂ ಭದ್ರಕೋಟೆ ಬೆಳಗಾವಿಯಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಗೆ ಈ ಸೋಲು ಅನಿರೀಕ್ಷಿತವಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಹೋದರ ಲಖನ್ ಅವರಿಗೆ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರೂ, ವರಿಷ್ಠರು ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದರು.
ಪಕ್ಷೇತರರಾಗಿ ಕಣಕ್ಕಿಳಿದ ಲಖನ್ ಜಯಗಳಿಸಿದ್ದು, ಬಿಜೆಪಿ ನಾಯಕರಿಗೆ ಬೆಳಗಾವಿ ಸೋಲು ಅರಗಿಸಿಕೊಳ್ಳಲಾಗುತ್ತಿಲ್ಲ. ಭದ್ರ ಕೋಟೆಯಲ್ಲಿ ಸೋಲು ಕಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ತಮಗೆ ಸಚಿವ ಸ್ಥಾನ ನೀಡದಿರುವುದು, ಲಖನ್ ಗೆ ಬಿಜೆಪಿ ಟಿಕೆಟ್ ನೀಡದಿರುವುದರಿಂದ ರಮೇಶ್ ಮುನಿಸಿಕೊಂಡಿದ್ದಾರೆನ್ನಲಾಗಿದೆ. ಆದರೆ, ಈ ಸೋಲಿಗೆ ತಾವು ಕಾರಣರಲ್ಲವೆಂದು ರಮೇಶ ಜಾರಕಿಹೊಳಿ ಈಗಾಗಲೇ ಸ್ಪಷ್ಟಪಡಿಸಿದ್ದು, ಬಿಜೆಪಿ ಸೋಲಿನ ಹೊಣೆ ನನಗೆ ಕಟ್ಟುವ ಪ್ರಯತ್ನ ನಡೆದಿದೆ. ನಾನು ಪಕ್ಷಕ್ಕಾಗಿಯೇ ಕೆಲಸ ಮಾಡಿದ್ದೇನೆ. ಮತದಾನದ ಕೊನೆ ನಾಲ್ಕು ದಿನ ಬದಲಾವಣೆ ಆಗಿದೆ. ನಾನು ಬಿಜೆಪಿ ಶಾಸಕನಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಬಾಂಬ್ ಸಿಡಿಸಿದ್ದಾರೆ.