ಬೆಟ್ಟದಪುರ: ಮೈಸೂರಿನಿಂದ 84 ಕಿ.ಮೀ ದೂರವಿರುವ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಈ ಬೆಟ್ಟದ ತಪ್ಪಲಿನಲ್ಲೇ ಇರುವ ಏಣಿ ಹನುಮಂತರಾಯ ದೇವಸ್ಥಾನ ಭಕ್ತರ ನೆಚ್ಚಿನ ತಾಣವಾಗಿದೆ.
ಭಕ್ತಿಗೆ ಒಲಿಯುವ ಹನುಮಂತನೆಂದೇ ಪ್ರಸಿದ್ಧಿ ಪಡೆದಿದೆ.
ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೇ, ಬೆಟ್ಟದ ತಪ್ಪಲಿನ ಎಡಭಾಗಕ್ಕೆ ಕಾಲ್ನಡಿಗೆ ಯಲ್ಲಿ ತೆರಳಬೇಕು. ಬಲಭಾಗಕ್ಕೆ ಏಣಿ ಹನುಮಂತರಾಯ ದೇವಾಲಯವಿದ್ದು, 120 ಮೆಟ್ಟಿಲುಗಳನ್ನು ಏರಿ ದೇವಾಲಯಕ್ಕೆ ಪ್ರವೇಶ ಮಾಡಬಹುದು.
ಈ ದೇವಾಲಯದಲ್ಲಿ 15 ಅಡಿಗಳಷ್ಟು ಎತ್ತರದ ಕಲ್ಲಿನ ಮೇಲೆ ಕೆತ್ತಿದ ಆಂಜನೇಯ ವಿಗ್ರಹವಿದೆ. ಇದು ಲಕ್ಷ್ಮಣನು ಆಂಜನೇಯನ ಭುಜದ ಮೇಲೆ ಕುಳಿತು ಇಂದ್ರಜಿತ್ತನೊಂದಿಗೆ ಯುದ್ಧ ಮಾಡುತ್ತಿರುವುದನ್ನು ಸೂಚಿಸುತ್ತದೆ. ವಿಗ್ರಹದ ಕಲ್ಲು ತುಂಬಾ ಎತ್ತರಕ್ಕೆ ಬೆಳೆಯುತ್ತಿರುವುದರಿಂದ ಅದಕ್ಕೆ ಏಣಿ ಹನುಮಂತರಾಯ ಎಂದು ಕರೆಯಲಾಗಿದೆ. ಈ ಕಲ್ಲು ಬೆಳೆಯುತ್ತಿದ್ದ ರಿಂದ ನೆತ್ತಿಯ ಮೇಲೆ ಕಬ್ಬಿಣದ ಮೊಳೆಗಳನ್ನು ಹೊಡೆದು ಅದರ ಬೆಳವಣಿಗೆಯನ್ನು ನಿಲ್ಲಿಸಲಾಗಿದೆ ಎಂಬ ಪ್ರತೀತಿ ಇದೆ.
ಈ ದೇವಸ್ಥಾನದ ಪಕ್ಕದಲ್ಲೇ ಶಿವಲಿಂಗವಿದ್ದು, ಅದರ ಮುಂದೆ ಗೂಡನ್ನು ಕೊರೆದು ಗಣಪತಿ ಮತ್ತು ಶಿವ ಪಾರ್ವತಿ ವಿಗ್ರಹಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಬಲಭಾಗದ ಗೋಡೆ ಪಕ್ಕದ ಬಂಡೆ ಮೇಲೆ ಗಣಪತಿ ಜಾರುಗುಪ್ಪೆ ಆಟ ಆಡುತ್ತಿದ್ದ ಎಂಬ ಪ್ರತೀತಿ ಇದೆ. ಈ ದೇವಾಲಯದ ಸುತ್ತ ಸಣ್ಣಸಣ್ಣ ಗುಹೆಗಳು ಕಾಣಸಿಗುತ್ತವೆ.
ಇಲ್ಲಿ ಪ್ರತಿ ಮಂಗಳವಾರ ಹಾಗೂ ಶನಿವಾರ ಮಾರ್ವಾಡಿ ಜನಾಂಗದವರು ವಿಶೇಷ ಪೂಜೆ ಸಲ್ಲಿಸುತ್ತಾರೆ. ವಾಯು ವಿಹಾರಕ್ಕೆಂದು ಬರುವವರು ದೇವಸ್ಥಾನದ ಬಳಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಮಕ್ಕಳಿಗೆ ಆಟವಾಡಲು ಅನುಕೂಲಕರ ಜಾಗವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: