ಚುನಾವಣೆ ಹತ್ತಿರ ಬರ್ತಿದ್ದಂತೆ ಕಾಂಗ್ರೆಸ್ನಲ್ಲಿ ಟಿಕೆಟ್ ಕಿತ್ತಾಟ ಜೋರಾಗಿದೆ. ರಾಮದುರ್ಗ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇದ್ದ ಗೊಂದಲವನ್ನು ಸಿದ್ದರಾಮಯ್ಯ ಬಗೆಹರಿಸಿದ್ದರು. ಇನ್ನೇನು ತಮ್ಮ ಆಪ್ತನಿಗೆ ಟಿಕೆಟ್ ಕೊಟ್ಟೇ ಬಿಡೋದು ಅಂತಾ ನಿರ್ಧರಿಸಿದ ಸಿದ್ದರಾಮಯ್ಯಗೆ ಎದುರಾಗಿದ್ದು, ಬೆಂಬಲಿಗರ ಪ್ರತಿಭಟನೆಯ ಸ್ವಾಗತ.
ತಾವು ಉಳಿದುಕೊಂಡ ಹೋಟೆಲ್ ಆವರಣದಲ್ಲೇ ತಡರಾತ್ರಿ ಹೈಡ್ರಾಮ ನಡೆದಿದೆ.
ಖಾಸಗಿ ಹೋಟೆಲ್ ಮುಂದೆ ಕಾಂಗ್ರೆಸ್ ಬೆಂಬಲಿಗರು ಜಮಾಯಿಸಿದ್ದರು. ಚಿಕ್ಕ ರೇವಣ್ಣರಿಗೆ ಟಿಕೆಟ್ ಕೊಡಿ ಅಂತಾ ಪೋಸ್ಟರ್ ಹಿಡಿದುಕೊಂಡು ರಾತ್ರೋರಾತ್ರಿ ಮಹಿಳೆಯರು, ಹಿರಿಯರು, ಯುವನಾಯಕರು ಧರಣಿ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆಯಿತು. ಇದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಹೋಟೆಲ್ ಮುಂದೆ ತಡರಾತ್ರಿ ಹೈಡ್ರಾಮಾ ನಡೆದಿದೆ.
ಚಿಕ್ಕರೇವಣ್ಣಗೆ ಟಿಕೆಟ್ ಕೊಡುವಂತೆ ಬೆಂಬಲಿಗರ ಹಂಗಾಮ
ಬೆಳಗಾವಿಯ ರಾಮದುರ್ಗ ಕ್ಷೇತ್ರದ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಬಡಿದಾಟ ಜೋರಾಗಿದೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರೋ ಅಶೋಕ್ ಪಟ್ಟಣ್ಗೆ ಟಿಕೆಟ್ ಕೊಡಲಾಗುತ್ತೆ ಎಂದು ಸುದ್ದಿ ಹರಡ್ತಿದ್ದಂತೆ ಚಿಕ್ಕರೇವಣ್ಣ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಟಿಕೆಟ್ ವಿಚಾರವಾಗಿ ಮಾತುಕತೆಗೆ ಎಂದು ಸಿದ್ದರಾಮಯ್ಯ ಉಳಿದುಕೊಂಡಿರೋ ಖಾಸಗಿ ಹೋಟೆಲ್ ಮುಂಭಾಗದಲ್ಲೇ ಜಮಾಯಿಸಿದ ನೂರಾರು ಬೆಂಬಲಿಗರು ಚಿಕ್ಕರೇವಣ್ಣಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.
ಅಷ್ಟಕ್ಕೂ ಚಿಕ್ಕರೇವಣ್ಣ ಬೆಂಬಲಿಗರು ಏಕಾಏಕಿ ರೊಚ್ಚಿಗೆದ್ದು ಪ್ರತಿಭಟನೆ ನಡೆಸೋದಕ್ಕೂ ಕಾರಣ ಏನು ಅಂದರೆ ಕಳೆದ 2 ದಿನಗಳಿಂದ ರಾಮದುರ್ಗ ಟಿಕೆಟ್ ಆಕಾಂಕ್ಷಿಗಳ ಜೊತೆ ಸಿದ್ದರಾಮಯ್ಯ ಸಭೆ ನಡೆಸ್ತಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿರೋ ಚಿಕ್ಕರೇವಣ್ಣರ ಮನವೊಲಿಸಿ ಈ ಬಾರಿ ಅಶೋಕ್ ಪಟ್ಟಣ್ಗೆ ಅವಕಾಶ ಮಾಡಿಕೊಡೋ ಬಗ್ಗೆ ಸಂಧಾನ ನಡೆದಿತ್ತು.
ಈ ವೇಳೆ ಸಿದ್ದರಾಮಯ್ಯ ಮಾತಿಗೆ ಚಿಕ್ಕರೇವಣ್ಣ ಕೂಡಾ ಒಪ್ಪಿಗೆ ಸೂಚಿಸಿದ್ದರು. ಈ ಸಂಧಾನದ ವಿಚಾರ ಯಾವಾಗ ಚಿಕ್ಕರೇವಣ್ಣ ಬೆಂಬಲಿಗರ ಕಿವಿಗೆ ಬಿತ್ತೋ ಮಹಿಳೆಯರು, ವೃದ್ಧರು ಸೇರಿದಂತೆ ನೂರಾರು ಜನ ಸಿದ್ದರಾಮಯ್ಯ ಉಳಿದುಕೊಂಡಿರೋ ಹೋಟೆಲ್ ಮುಂದೆ ಜಮಾಯಿಸಿ ಈ ಬಾರಿ ಚಿಕ್ಕರೇವಣ್ಣಗೆ ಟಿಕೆಟ್ ಕೊಡಲೇಬೇಕು ಅಂತಾ ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಹೋಟೆಲ್ ಒಳಗಡೆ ಇದ್ದಂತೆಯೇ ಇಷ್ಟೆಲ್ಲಾ ಹಂಗಾಮ, ಹೈಡ್ರಾಮಾ ನಡೆದಿದೆ. ಕೊನೆಗೆ ಚಿಕ್ಕರೇವಣ್ಣ ಬೆಂಬಲಿಗರನ್ನು ಚದುರಿಸಲು ಪೊಲೀಸರೇ ಸ್ಥಳಕ್ಕೆ ಬರಬೇಕಾಯ್ತು. ಇದು ಖಾಸಗಿ ಹೋಟೆಲ್ ಇಲ್ಲೆಲ್ಲಾ ಈ ರೀತಿ ಪ್ರತಿಭಟನೆ ಮಾಡಿ ಗದ್ದಲ ಎಬ್ಬಿಸಬೇಡಿ ಅಂತಾ ಪೊಲೀಸರು ಎಷ್ಟೇ ಮನವಿ ಮಾಡಿದ್ರೂ ಬೆಂಬಲಿಗರು ಮಾತ್ರ ಸ್ಥಳ ಬಿಟ್ಟು ಕದಲಲೇ ಇಲ್ಲ. ಕೊನೆಗೆ ಉನ್ನತ ಪೊಲೀಸ್ ಅಧಿಕಾರಿ ಸ್ಥಳಕ್ಕಾಗಮಿಸಿ ಎಲ್ಲರನ್ನು ಹೋಟೆಲ್ ಆವರಣದಿಂದ ಹೊರಕ್ಕೆ ಕಳುಹಿಸಿದರು. ಈ ವೇಳೆ ಚಿಕ್ಕರೇವಣ್ಣ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ಹಂಚಿಕೆಯದ್ದೇ ಟೆನ್ಶನ್ ಆಗಿದೆ. ಈ ಬಾರಿ ಕಾಂಗ್ರೆಸ್ಗೆ ರಾಜ್ಯದಲ್ಲಿ ಪೂರಕ ವಾತಾವರಣ ಇದೆ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅನ್ನೋ ಟ್ರೆಂಡ್ನಿಂದ ಒಂದೇ ಕ್ಷೇತ್ರದಲ್ಲಿ ಹೆಚ್ಚೆಚ್ಚು ಟಿಕೆಟ್ ಆಕಾಂಕ್ಷಿಗಳು ಬೇಡಿಕೆ ಇಡ್ತಿದ್ದಾರೆ. ರಾಮದುರ್ಗ ಟಿಕೆಟ್ ಗೊಂದಲ ಬಗೆಹರಿಸಿದ ಬೆನ್ನಲ್ಲೇ ಬೆಂಬಲಿಗರು ರೊಚ್ಚಿಗೆದ್ದಿದ್ದು, ಸಿದ್ದರಾಮಯ್ಯಗೆ ಮತ್ತಷ್ಟು ತಲೆನೋವು ತಂದಿಟ್ಟಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada