ಬೆಂಗಳೂರು, ನ.2- ಬಿಟ್ ಕಾಯಿನ್ ಆರೋಪಿ ಶ್ರೀಕಿ ಜತೆ ಬಿಜೆಪಿಯ ಯಾವ ನಾಯಕರ ಸಂಪರ್ಕವೂ ಇಲ್ಲ. ಆದರೆ, ಕಾಂಗ್ರೆಸ್ನ ಪ್ರಮುಖರ ಮಕ್ಕಳ ಜತೆ ಆತ ಸಿಕ್ಕಿಬಿದ್ದಿರುವ ನಿದರ್ಶನವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ಮಾಜಿ ಶಾಸಕರೊಬ್ಬರ ಮಗನ ಜತೆ 2018ರಲ್ಲಿ ಡ್ರಗ್ಸ್ ಹಗರಣದಲ್ಲಿ ಕೂಡ ಶ್ರೀಕಿ ಸಿಕ್ಕಿಬಿದ್ದಿದ್ದ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ ಮುಖ್ಯಮಂತ್ರಿಯಾಗಿದ್ದರು. ಆಗಿನ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಟ್ ಕಾಯಿನ್ ಪ್ರಕರಣವನ್ನು ಇಡಿ ಮತ್ತು ಇಂಟರ್ಪೆಲ್ಗೆ ಶಿಫಾರಸು ಮಾಡಿದ್ದೇವೆ. ಶ್ರೀಕಿ ಜತೆ ಬಿಜೆಪಿಯ ಯಾರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಕಾಂಗ್ರೆಸ್ನವರು ಬಾಯಿಬಿಟ್ಟು ಹೇಳಬೇಕು. ನಮ್ಮ ನಾಯಕರು ಯಾರೂ ಆತನೊಂದಿಗೆ ಇಲ್ಲ. ಇರುವವರೆಲ್ಲ ಕಾಂಗ್ರೆಸ್ನವರೇ. ಘನತೆ ಇದ್ದರೆ ಆ ವಿಚಾರದಲ್ಲಿ ಸುಮ್ಮನಿರಬೇಕು ಎಂದು ಕಾಂಗ್ರೆಸ್ನವರಿಗೆ ತಿರುಗೇಟು ನೀಡಿದರು.ಯುಬಿ ಸಿಟಿಯಲ್ಲಿ ಗಲಾಟೆ ನಡೆದಾಗ ವಿಚಾರಣೆ ಮಾಡದೆ ಬಿಟ್ಟು ಕಳಿಸಿದ್ದೂ ಅವರೇ ಎಂದು ಸಚಿವರು ಆರೋಪಿಸಿದರು.
ಪರಿಣಾಮ ಬೀರಲ್ಲ: ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು. ನಿರೀಕ್ಷೆಯಂತೆ ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಸಿದ್ದಾರೆ. ಹಾನಗಲ್ನಲ್ಲಿ ಹಿಂದು-ಮುಂದು ಆಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಹೀಗೆ ಆಗಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು. ಹಾಗೆಯೇ ಹಾನಗಲ್ನಲ್ಲೂ ಆಗಲಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಹಾನಗಲ್ನಲ್ಲಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.