ಭಾರತೀಯ ನ್ಯಾಯ ವ್ಯವಸ್ಥೆಯನ್ನು ಪ್ರಶ್ನಿಸುವವರು ಸಲ್ಮಾನ್ ಖಾನ್ ಪ್ರಕರಣ ಉಲ್ಲೇಖಿಸದೇ ಇರಲು ಸಾಧ್ಯವೇ ಇಲ್ಲ. ಸಲ್ಮಾನ್ ಪ್ರಕರಣವೇ ಅಂಥಹದ್ದು.
ಹಿಟ್ ಆಂಡ್ ರನ್ ಅಂಥಹಾ ಪ್ರಮುಖ ಕ್ರಿಮಿನಲ್ ಅಪರಾಧಗಳನ್ನು ಮಾಡಿದರೂ ಸಲ್ಮಾನ್ ಖಾನ್ ದೋಷಿ ಆಗದೆ ಹೊರಬಿದ್ದರು.
ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ದೋಷಿ ಎಂದು ಆದೇಶ ಹೊರಬಿದ್ದಿದ್ದರೂ ಮೇಲ್ಮನವಿಗಳ ಮೇಲೆ ಮೇಲ್ಮನವಿಗಳಾಗಿ ಪ್ರಕರಣ ಕುಟುಂತ್ತಾ ಸಾಗುತ್ತಿದೆ.
ಹಿಟ್ ಆಂಡ್ ರನ್ ಹಾಗೂ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ‘ಐ ವಿಟ್ನೆಸ್’ಗಳಿದ್ದರೂ ಸಲ್ಮಾನ್ ಖಾನ್ ಶಿಕ್ಷೆ ಅನುಭವಿಸಲಿಲ್ಲ. ಅದರಲ್ಲೂ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಾಕ್ಷಿಯಾಗಿದ್ದರೂ ಸಹ ಸಲ್ಮಾನ್ ಖಾನ್ ಪ್ರಕರಣದಿಂದ ಬಚಾವಾದರು. ಇದಕ್ಕೆ ಕಾರಣ ಅವರ ವಕೀಲ ಶ್ರೀಕಾಂತ್ ಶಿವಾಡೆ.
ಸಲ್ಮಾನ್ ಖಾನ್ ಪ್ರಕರಣದಿಂದಾಗಿ ಬಹಳ ದೊಡ್ಡ ಹೆಸರು ಗಳಿಸಿದ ಶ್ರೀಕಾಂತ್ ಶಿವಾಡೆ ಇಂದು ಮೃತರಾಗಿದ್ದಾರೆ. ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. 2002ರ ಹಿಟ್ ಆಂಡ್ ರನ್ ಹಾಗೂ 1998ರ ಕೃಷ್ಣ ಮೃಗ ಭೇಟೆ ಎರಡೂ ಪ್ರಕರಣಗಳಲ್ಲಿ ಶ್ರೀಕಾಂತ್ ಶಿವಾಡೆ ಸಲ್ಮಾನ್ ಖಾನ್ ಪರ ವಕಾಲತ್ತು ವಹಿಸಿದ್ದರು.
ಹಿಟ್ ಆಂಡ್ ರನ್ ಕೇಸ್ನಲ್ಲಿ ಸಲ್ಮಾನ್ ಖಾನ್ ಅನ್ನು ನಿರ್ದೋಷಿಯನ್ನಾಗಿ ತೀರ್ಪು ಹೊರಡಿಸುವಂತೆ ಮಾಡಿದರೆ, ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಸೈಫ್ ಅಲಿ ಖಾನ್, ರವೀನಾ ಟಂಡನ್ ಇತರರನ್ನು ನಿರ್ದೋಷಿಗಳನ್ನಾಗಿ ಮಾಡಿದರು. ಸಲ್ಮಾನ್ ಖಾನ್ ಸಹ ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸುವುದರಿಂದ ತಡೆದಿಟ್ಟಿರುವ ಶ್ರೇಯ ಇದೇ ವಕೀಲ ಶ್ರೀಕಾಂತ್ ಶಿವಾಡೆಗೆ ಸಲ್ಲಬೇಕು.
ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ಬಾಲಿವುಡ್ನ ಮತ್ತೊಬ್ಬ ನಟ ಶೈನಿ ಅಹೂಜಾ ಪರವಾಗಿ ಅತ್ಯಾಚಾರ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು.
ಶ್ರೀಕಾಂತ್ ಶಿವಾಡೆ ಸಾವಿಗೆ ಸ್ಪಂದಿಸಿರುವ ಕೆಲವು ಹಿರಿಯ ವಕೀಲರು, ವಕೀಲರ ಬಾರ್ಗೆ ದೊಡ್ಡ ನಷ್ಟ ಇದೆಂದು ಬಣ್ಣಿಸಿದ್ದಾರೆ. ವಕೀಲ ವೃತ್ತಿಯ ಕೌಟುಂಬಿಕ ಹಿನ್ನೆಲೆ ಇಲ್ಲದೆ ವೃತ್ತಿ ಆರಂಭಿಸಿದ ಶ್ರೀಕಾಂತ್ ಶಿವಾಡೆ ಭಾರತದ ಅತ್ಯುತ್ತಮ ಕ್ರಿಮಿನಲ್ ಲಾಯರ್ಗಳಲ್ಲಿ ಒಬ್ಬರಾಗಿ ಹೆಸರು ಗಳಿಸಿದರು. ಶ್ರೀಕಾಂತ್ ಶಿವಾಡೆ, ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada