ಬೆಂಗಳೂರು: ಎಲ್ಲರಂತೆ ನಾನಲ್ಲ, ನೀವು ಹೇಳಿದ್ದೆನ್ನೆಲ್ಲ ಕೇಳಿಸಿಕೊಂಡು ಹೋಗುವವನಲ್ಲ. ನಾನೇ ಬೇರೆ, ನನ್ನ ಆಡಳಿತದ ಶೈಲಿಯೇ ಬೇರೆ. ನೀವು ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಲ್ಲ, ಕೆಳಹಂತದ ಅಧಿಕಾರಿಗಳು ನಿಮಗೆ ಹೆದರಲ್ಲ ಎನ್ನುವುದು ಗೊತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯದ ಎಲ್ಲ ಜಿ.ಪಂ.ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಸಿಇಒ ಗಳಿಗೆ ಕ್ಲಾಸ್ ತೆಗೆದುಕೊಂಡರು.
ಬದಲಾವಣೆ ಆರಂಭವಾಗಿದೆ, ನೀವು ಬದಲಾಗಲೇಬೇಕು. ಹೇಳೋರು ಕೇಳೋರು ಇಲ್ಲವೆಂದುಕೊಳ್ಳಬೇಡಿ. ನಾವು ಹೇಳುತ್ತೇವೆ, ಜನರೂ ಕೇಳುತ್ತಾರೆ ಎಂದರು.
ಅಪೌಷ್ಟಿಕತೆ ನಿವಾರಣೆ, ತಾಯಿ- ಶಿಶು ಮರಣ ಪ್ರಮಾಣ ತಗ್ಗಿಸಲು ಹೆಚ್ಚಿನ ಒತ್ತು ನೀಡಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಯಲ್ಲಿಡಲಾಗಿದೆ. ಮೂರು ದಶಕ ಕಳೆದರೂ ಈ ಸಮಸ್ಯೆ ಬಗೆಹರಿದಿಲ್ಲವೆಂದರೆ ಏನರ್ಥ ?. ಜಿಲ್ಲಾಮಟ್ಟದಲ್ಲಿ ನೀವೇ ( ಸಿಇಒ) ಮುಖ್ಯ ಕಾರ್ಯದರ್ಶಿಗಳಿದ್ದಂತೆ. ಆದರೆ ನಿಮ್ಮಿಂದ ಅಂತಹ ಪ್ರಯತ್ನಗಳಾಗುತ್ತಿಲ್ಲ. ನಿರ್ಣಾಯಾತ್ಮಕ ಕ್ರಮಗಳಾಗುತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada