ಬೆಂಗಳೂರು,ಏ.5- ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಸೀದಿಗಳಲ್ಲಿನ ಆಜಾನ್(ಮೈಕ್) ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಸಮಾನರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಯಾವುದೇ ಹೊಸ ಕಾನೂನುಗಳನ್ನು ಈಗ ಜಾರಿಗೆ ತರುತ್ತಿಲ್ಲ. 2001, 2002 ಹಾಗೂ ಹೈಕೋರ್ಟ್ನ ಆದೇಶಗಳ ಅನುಸಾರ ಜಾರಿಗೆಯಾಗುತ್ತದೆ. ಹಿಂದಿನ ಸರ್ಕಾರಗಳೇ ಈ ನಿಯಮಗಳನ್ನು ಜಾರಿ ಮಾಡಿದ್ದು ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸರ್ಕಾರ ಮೊದಲ ಆದ್ಯತೆ ಕೊಟ್ಟಿದೆ. ಎಲ್ಲಿಯೂ ಕೂಡ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿಲ್ಲ. ಸಂಘಟನೆಗಳೇ ಇರಲಿ, ಯಾರೇ ಇರಲಿ ಸರ್ಕಾರದ ದೃಷ್ಟಿಯಲ್ಲಿ ಒಂದೇ ಎಂದರು. ಮಸೀದಿಗಳಲ್ಲಿ ಆಜಾನ್ ಕೂಗುವಾಗ ಮೈಕ್ಗಳಿಗೆ ಎಷ್ಟು ಡಿಸಿಬಲ್ ಅಳವಡಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಧಾರ್ಮಿಕ ಮುಖಂಡರು ಸಂಘಟನೆಗಳ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಮಾಜವಾಗಲಿ, ಯಾವುದೇ ಸಂಘಟನೆಯಾಗಲಿ ಕಾನೂನು ಕೈಗೆತ್ತಿಕೊಳ್ಳದೆ ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ. ದೇವಸ್ಥಾನ,ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಎಷ್ಟು ಡೆಸಿಮಲ್ ವರೆಗೆ ಬಳಸಬೇಕು ಹಿಂದಿನ ಆದೇಶವಿದ್ದು, ಅದನ್ನು ಹಂತಹಂತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜÁರಿಗೆ ತರುವ ಕೆಲಸ ನಡೆಯುತ್ತಿದೆ ಎಂದರು.
ನಮ್ಮ ಸರ್ಕಾರ ಹೊಸದಾಗಿ ಯಾವ ಆದೇಶವನ್ನು ಮಾಡುತ್ತಿಲ್ಲ. ಬಿಜೆಪಿ ಅಕಾರಕ್ಕೆ ಬಂದ ಮೇಲೆ ಇವುಗಳು ಜಾರಿಗೆ ಬಂದಿದ್ದಲ್ಲ. ಹಿಂದಿನ ಆದೇಶಗಳನ್ನೇ ನಾವು ಪಾಲನೆ ಮಾಡುತ್ತಿದ್ದೇವೆ ಅಷ್ಟೇ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಆದರೆ ಈವರೆಗೂ ಅವರ ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ನನಗೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರಿಂದ ಸೂಚನೆ ಬಂದಿಲ್ಲ. ದೆಹಲಿಗೆ ಹೋದಾಗ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಭೇಟಿಯಾದಾಗ ಸೂಚನೆ ಬರಬಹುದೆಂಬ ನಿರೀಕ್ಷೆಯಿದೆ ಎಂದರು.
ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಸಾಯಂಕಾಲ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ. ಅವರ ಜೊತೆ ಮೇಕೆದಾಟು, ಮಹದಾಯಿ ಯೋಜನೆಗಳ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಸೇರಿದಂತೆ ಹಲವು ಜಲ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಆಡಳಿತಾತ್ಮಕ, ತಾಂತ್ರಿಕವಾಗಿರುವ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಜಿಎಸ್ಟಿ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಸೈನಿಕ ಶಾಲೆಗೆ ಸೇರ್ಪಡೆ ಮಾಡುವ ಬಗ್ಗೆ ರಕ್ಷಣಾ ಸಚಿವರನ್ನು ನಾಳೆ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಕೇಂದ್ರ ಇಂಧನ ಖಾತೆ ಸಚಿವರನ್ನು ಕೂಡ ಭೇಟಿ ಮಾಡಲಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಧಾರರಹಿತ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿರುಗೇಟು ನೀಡಿದ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪಕ್ಷ, ತತ್ವ ಆದರ್ಶಗಳನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿರುವ ಪಕ್ಷವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದರು.
ಇಡೀ ಜಗತ್ತಿನ ಜನರು ಬಂದು ವ್ಯಾಪಾರ,ವಹಿವಾಟು ಮಾಡುವ ಬೆಂಗಳೂರು, ಕರ್ನಾಟಕಕ್ಕೂ ತೆಲಂಗಾಣ ರಾಜ್ಯಕ್ಕೂ ಅಲ್ಲಿನ ಐಟಿ-ಬಿಟಿ ಸಚಿವರು ಹೋಲಿಕೆ ಮಾಡುವುದು ಅತ್ಯಂತ ಹಾಸ್ಯಾಸ್ಪದ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಅತಿಹೆಚ್ಚು ಸ್ಟಾರ್ಟ್ಪ್ಗಳು, ಯೂನಿಕಾರ್ನ್ ಸೇರಿದಂತೆ ಅನೇಕ ಸಂಶೋಧನಾ ಕೇಂದ್ರಗಳಿವೆ ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುತ್ತದೆ. ಯಾರೋ ಒಬ್ಬರು ಏನೋಹೇಳಿದರೆಂದು ಅದಕ್ಕೆ ಹೆಚ್ಚಿನ ಮಹತ್ವ ಬೇಡ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada