ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದ ವಿಸ್ತರಣೆಯೇ ಆಗಿರುತ್ತವೆ. ಹೀಗಾಗಿ ಅವುಗಳ ಆಡಳಿತ ತನ್ನ ಕೈಯಲ್ಲಿ ಇರಬೇಕಾಗುತ್ತದೆ ಎಂದು ಪ್ರತಿಪಾದಿಸಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿ ಹಿಂಡಿದೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪ ಇರುವುದಾದರೆ, ದಿಲ್ಲಿಯಲ್ಲಿ ಚುನಾಯಿತ ಸರ್ಕಾರ ಇರುವುದರ ಅಗತ್ಯವೇನಿದೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ. ಸೇವೆಗಳ ಮೇಲಿನ ನಿಯಂತ್ರಣದ ಕುರಿತಾಗಿ ಕೇಂದ್ರ ಸರ್ಕಾರ ಮತ್ತು ದಿಲ್ಲಿ ಸರ್ಕಾರಗಳ ನಡುವೆ ನಡೆಯುತ್ತಿರುವ ತೀವ್ರ ತಿಕ್ಕಾಟದ ವಿಚಾರವಾಗಿ ಮೂರನೇ ದಿನದ ವಿಚಾರಣೆಗೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ದಿಲ್ಲಿಯು ರಾಷ್ಟ್ರ ರಾಜಧಾನಿಯಾಗಿ ವಿಶಿಷ್ಟ ಮಾನ್ಯತೆಯನ್ನು ಹೊಂದಿದೆ ಮತ್ತು ಎಲ್ಲ ರಾಜ್ಯಗಳ ನಾಗರಿಕರೂ ‘ತಮ್ಮದು’ ಎಂಬ ಭಾವನೆಯನ್ನು ಹೊಂದಿರುತ್ತಾರೆ ಎಂದು ಕೇಂದ್ರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿತು.”ದಿಲ್ಲಿ ಒಂದು ಕಾಸ್ಮೋಪಾಲಿಟನ್, ಕಿರಿದಾದ ಭಾರತದಂತೆ- ಇದು ಭಾರತಕ್ಕೆ ಸೇರಿದೆ” ಎಂದು ತುಷಾರ್ ಮೆಹ್ತಾ ಪ್ರತಿಕ್ರಿಯೆ ನೀಡಿದರು.
ನ್ಯಾಯಮೂರ್ತಿಗಳಾದ ಎಂಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠ, ಇಡೀ ದಿನ ವಿಚಾರಣೆ ನಡೆಸಿತು. ದಿಲ್ಲಿ ಸರ್ಕಾರಕ್ಕೆ ಕಾನೂನುಗಳನ್ನು ರೂಪಿಸುವ ಸಾಮರ್ಥ್ಯ ಇಲ್ಲದಿರುವ ವಿಷಯಗಳ ಕುರಿತಾದ ವಿಚಾರಣೆ ವೇಳೆ, ರಾಷ್ಟ್ರ ರಾಜಧಾನಿಯಲ್ಲಿನ ಸೇವೆಗಳ ನಿಯಂತ್ರಣದ ಮೇಲಿನ ಕಾನೂನಾತ್ಮಕ ಹಾಗೂ ಸಾಂವಿಧಾನಿಕ ಸ್ಥಿತಿಗಳ ಕುರಿತು ಪ್ರಶ್ನಿಸಿತು.
https://play.google.com/store/apps/details?id=com.speed.newskannada