ಮೈಸೂರು ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೆರೆಯ ಹಿಂದೆ ಮಾತುಕತೆ ಆರಂಭವಾಗಿದೆ.ಮೈಸೂರಿನ ಚಾಮುಂಡೇಶ್ವರಿ ವಿಧಾನಸಬಾ ಕ್ಷೇತ್ರ ಈಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿ ಪರಿಣಮಿಸಿದ್ದು, ಜಾತ್ಯತೀತ ಜನತಾದಳದ ಜಿ.ಟಿ.ದೇವೇಗೌಡರ ವಿರುದ್ಧ ಅಭಿಷೇಕ್ ಗೌಡ ಅವರನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ನಾಯಕರ ಯೋಚನೆ.ಈ ಹಿನ್ನೆಲೆಯಲ್ಲಿ ಸಂಸದರಾದ ಸುಮಲತಾ ಅವರನ್ನು ಸಂಪರ್ಕಿಸಿರುವ ಕಾಂಗ್ರೆಸ್ ನಾಯಕರು, ಚಾಮುಂಡೇಶ್ವರಿ ವಿಧಾನಸಬಾ ಕ್ಷೇತ್ರದ ಕಣದಿಂದ ಅಭಿಷೇಕ್ ಗೌಡ ಅವರನ್ನು ಕಣಕ್ಕಿಳಿಸಲು ಮನಸ್ಸು ಮಾಡುವಂತೆ ಹೇಳಿದ್ದಾರೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಅವರ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಗಣನೀಯವಾಗಿರುವುದು ರಹಸ್ಯವಲ್ಲ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಾ.ದಳದ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ತೆರೆಯ ಹಿಂದೆ ಸಹಕಾರ ನೀಡಿದ್ದದಾದರೂ ಇದರಲ್ಲಿ ಕಾಂಗ್ರೆಸ್ ಪಾಲು ದೊಡ್ಡದು.ಈ ಹಿನ್ನೆಲೆಯಲ್ಲಿಯೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣಕ್ಕೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರನ್ನು ಕಣಕ್ಕಿಳಿಸಿದರೆ ಹಲವು ದೃಷ್ಟಿಗಳಿಂದ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಮೊದಲನೆಯದಾಗಿ ದೊಡ್ಡ ಮಟ್ಟದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಬಹುದು. ತದನಂತರ ಕುರುಬ, ನಾಯಕ, ಮುಸ್ಲಿಂ ಮತ್ತು ದಲಿತ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಪಡೆದರೆ ಜಾ.ದಳದ ಜಿ.ಟಿ.ದೇವೇಗೌಡರನ್ನು ಪರಾಭವಗೊಳಿಸಬಹುದು ಎಂಬುದು ಕಾಂಗ್ರೆಸ್ ನಾಯಕರ ಯೋಚನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada