ಚಾರಲ್ಸ್ ಬಾಬೇಜ್ ನೈಋತ್ಯ ಇಂಗ್ಲೆಂಡಿನ ಡೆವೆನ್ಷೈರ್ ಕೌಂಟಿಯ ಟೈನ್ಮಾತ್ ಎಂಬಲ್ಲಿ 1792 ಡಿಸೆಂಬರ್ 26ರಂದು ಜನಿಸಿದ. ತಂದೆ ಬ್ಯಾಂಕರ್ ಆಗಿ ಕೆಲಸಮಾಡುತ್ತಿದ್ದರು. ಇದರಿಂದಾಗಿ ಬಾಬೇಜನಿಗೆ ಮುಂದೆ ಸಾಕಷ್ಟು ಪಿತ್ರಾರ್ಜಿತ ಹಣ ದೊರೆಯಿತು. ಹದಿನೆಂಟನೆಯ ವಯಸ್ಸಿನಲ್ಲಿ ಕೇಂಬ್ರಿಜನ್ನು ಸೇರಿ (1810) ವಿದ್ಯಾಭ್ಯಾಸ ಮುಂದುವರಿಸಿದ. ಇಂಗ್ಲೆಂಡಿನ ಖಗೋಳವಿಜ್ಞಾನಿ ಜಾನ್ ಫ್ರೆಡರಿಕ್ ವಿಲಿಯಮ್ ಹರ್ಷೆಲ್ (1792-1871) ಎಂಬವನೊಡಗೂಡಿ ಅನಲಿಟಿಕ್ ಸೊಸೈಟಿ ಎಂಬ ಸಂಘ ಸ್ಥಾಪಿಸಿದ (1815). ಈತ ಒಂದು ಕಾಲಕ್ಕೆ ಕೇಂಬ್ರಿಜಿನಲ್ಲಿ ಗಣಿತವಿಜ್ಞಾನ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದ. ಐರೋಪ್ಯ ರಾಷ್ಟ್ರಗಳಲ್ಲಿ ನಡೆದಿದ್ದ ಗಣಿತ ವಿಜ್ಞಾನ ಪ್ರವರ್ಧನೆಗಳ ಬಗ್ಗೆ ಇಂಗ್ಲೆಂಡಿನಲ್ಲೂ ಜಾಗೃತಿ ಮೂಡಿಸಲು ಮತ್ತು ಐಸಾಕ್ ನ್ಯೂಟನನ ಮರಣಾನಂತರ ಇಂಗ್ಲೆಂಡಿನಲ್ಲಿ ತಲೆದೋರಿದ್ದ ಉತ್ಸಾಹಭಂಗ ಪರಿಸ್ಥಿತಿಯನ್ನು ತೊಡೆದುಹಾಕಲು ಈ ಸಂಘದ ಸ್ಥಾಪನೆ ಆಗಿತ್ತು. ಇವನಿಗೆ 1816ರದಲ್ಲಿ ರಾಯಲ್ ಸೊಸೈಟಿಯ ಫೆಲೋ ಗೌರವ ಸಂದಾಯವಾಯಿತು. ಈತ ಸ್ಥಾಪಿಸಿದ ಸಂಘದಿಂದಾಗಿ ಮೋಬಿಯಸ್, ಲೊಬಾಚೆವಿಸ್ಕಿ, ಕ್ಯಾಂಟರ್ ಮೊದಲಾದ ಗಣಿತವಿದರು ಪೋಷಿಸಿ ಪಾಲಿಸಿಕೊಂಡು ಬಂದ ಗಣಿತ ಪ್ರಗತಿಗಳನ್ನು ಕುರಿತು ಪರಸ್ಪರ ಚರ್ಚಿಸಲು ಸಾಧ್ಯವಾಯಿತು.
ಉತ್ಪನ್ನಗಳನ್ನು ಕುರಿತ ಕಲನವಿಜ್ಞಾನದ ಬಗ್ಗೆ ಬಾಬೇಜ್ ಅಧ್ಯಯನ ನಡೆಸಿದ್ದ. ಗಣಿತಕೋಷ್ಟಕಗಳಲ್ಲಿದ್ದ ನ್ಯೂನತೆ ಮತ್ತು ಸ್ಖಾಲಿತ್ಯಗಳನ್ನು ಈತ ವಿವೇಚನೆ ನಡೆಸಿದ ಕಾರಣ ಮುಂದೆ ಗಣಕಯಂತ್ರವೊಂದರ ಉಪಜ್ಞೆಗೆ ಎಡೆಯಾಯಿತು. ಆದರೆ ಆ ಯಂತ್ರ ಮಾತ್ರ ಪೂರ್ಣವಾಗಲೇ ಇಲ್ಲ. ಈತ ಆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವಿಜ್ಞಾನದ ಅಧ್ಯಯನಕ್ಕಾಗಿ ಇದ್ದ ಅನನುಕೂಲ ಪರಿಸ್ಥಿತಿ ಕುರಿತು ಒಂದು ಪುಸ್ತಕ ಬರೆದ (1830). ಇದು ವಾದವಿವಾದಗಳಿಗೆ ಎಡೆಮಾಡಿಕೊಟ್ಟಿತು. ಅಂಚೆಪತ್ರವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುವುದರಲ್ಲಿ ತಗಲುವ ಖರ್ಚು, ದೇಹದುಡಿಮೆ ಇತ್ಯಾದಿಗಳ ಬಗ್ಗೆ ತಿಳಿಸುವ ಅಪರೇಷನ್ಸ್ ರಿಸರ್ಚ್ (ಪರಿಕರ್ಮಗಳ ಸಂಶೋಧನೆ) ಎಂಬ ಗಣಿತಪ್ರಕಾರ ಕುರಿತ ಅಧ್ಯಯನ ನಡೆಸಿದ. ಮುಂದೆ ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ದೇಶಾದ್ಯಂತ ಆಧುನಿಕ ಅಂಚೆ ವ್ಯವಸ್ಥೆ ಏರ್ಪಡಿಸುವುದು ಸಾಧ್ಯವಾಯಿತು. ಜೀವನಾಂಕನ ಕೋಷ್ಟಕ (ಆಕ್ಚ್ಯುಯರಿ ಟೇಬಲ್) ಮತ್ತು ವೇಗಮಾಪಕಗಳ ಬಗ್ಗೆಯೂ ಬಾಬೇಜ್ ಕೆಲಸಮಾಡಿದ. ರೇಲ್ವೆ ಎಂಜಿನ್ನಿನ ಮುಂಭಾಗಕ್ಕೆ ಅಳವಡಿಸುವ ಪಶುನಿವಾರಕ (ಕೌ ಕ್ಯಾಚರ್) ಸಲಕರಣೆಯನ್ನು ಉಪಜ್ಞಿಸಿದ. ನೇತ್ರದರ್ಶಕವನ್ನು 1847ರಲ್ಲಿ ಉಪಜ್ಞಿಸಿದ್ದನಾದರೂ ಅದು ಜನರ ಗಮನಕ್ಕೆ ಬರಲೇ ಇಲ್ಲ. ನಾಲ್ಕು ವರ್ಷಗಳ ಅನಂತರಜರ್ಮನಿಯ ವೈದ್ಯ ಹರ್ಮನ್ ಹೆಲ್ಮ್ಹೋಲ್ಟ್ಸ್ನಿಗೆ ಆ ಕೀರ್ತಿ ಸಂದಾಯವಾಯಿತು.
Please follow and like us:
Mon Dec 26 , 2022
ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ ಮತ್ತು ಸಾಹಿತ್ಯಾಭಿಮಾನಿ ಬಳಗದಲ್ಲಿಅವರು ಕಿರಂ ಎಂದೇ ಚಿರಪರಿಚಿತರು.ಕಿತ್ತಾನೆ ರಂಗಪ್ಪ ನಾಗರಾಜ ಅವರು 1943ರ ಡಿಸೆಂಬರ್ 25ರಂದು ಹಾಸನ ಜಿಲ್ಲೆಯ ಕಿತ್ತಾನೆಯಲ್ಲಿ ಜನಿಸಿದರು. ಕಿತ್ತಾನೆಯಲ್ಲಿ ಪ್ರಾಥಮಿಕ ಅಭ್ಯಾಸವನ್ನು ಪೂರ್ಣಗೊಳಿಸಿದರು. ಬಿ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು, ಎಂ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದರು.ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ […]