ಪ್ರತಿಪಕ್ಷಗಳ ಟೀಕೆ ಮತ್ತು ಪ್ರತಿಭಟನೆಗಳ ನಡುವೆಯೇ ಅಸ್ಸಾಂ ಪೊಲೀಸರು ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಒಟ್ಟು ೨,೪೪೧ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಪಿಡುಗನ್ನು ಕೊನೆಗೊಳಿಸುವ ಕಾರ್ಯಾಚರಣೆಯು ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಚಾಲ್ತಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಸ್ಪಷ್ಟಪಡಿಸಿದ್ದರು. ಆದರೆ, ಇದು ತರಾತುರಿಯಲ್ಲಿ ನಡೆಸಿದ ಪ್ರಚಾರದ ಕಸರತ್ತು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ರಾಜ್ಯಾದ್ಯಂತ ೪,೦೭೪ ಎಫ್ಐಆರ್ಗಳು ದಾಖಲಾಗಿದ್ದು, ಅದರ ಆಧಾರದಲ್ಲಿ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸ್ವನಾಥ್ ಜಿಲ್ಲೆಯಲ್ಲಿ ಕನಿಷ್ಠ ೧೩೯ ಜನರನ್ನು ಬಂಧಿಸಲಾಗಿದೆ, ಬರ್ಪೇಟಾದಲ್ಲಿ ೧೩೦ ಮತ್ತು ಧುಬ್ರಿಯಲ್ಲಿ ೧೨೬, ಬಕ್ಸಾದಲ್ಲಿ ೧೨೩, ಬೊಂಗೈಗಾಂವ್ ಮತ್ತು ಹೊಜೈನಲ್ಲಿ ತಲಾ ೧೧೭ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.
ಬಾಲ್ಯ ವಿವಾಹಗಳ ವಿರುದ್ಧ ಧುಬ್ರಿಯಲ್ಲಿ ಅತಿ ಹೆಚ್ಚು (೩೭೪) ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಹೊಜೈ (೨೫೫) ಮತ್ತು ಮೊರಿಗಾಂವ್ (೨೨೪) ನಂತರದ ಸ್ಥಾನದಲ್ಲಿವೆ.ಕಾರ್ಯಾಚರಣೆ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಬಾಲ್ಯ ವಿವಾಹದ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸುವ ಮನಸ್ಸಿದ್ದಿದ್ದರೆ ಅಸ್ಸಾಂ ಸರ್ಕಾರವು ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.ಬಾಲ್ಯವಿವಾಹಗಳನ್ನು ನಿಲ್ಲಿಸಬೇಕಾದರೆ ಶಾಲೆಗಳನ್ನು ತೆರೆಯಬೇಕು ಎಂದು ತಜ್ಞರು ಹೇಳಿದ್ದಾರೆ, (ಆದರೆ) ನೀವು ಅದನ್ನು ಮಾಡಿಲ್ಲ. ಮದರಸಾಗಳನ್ನೂ ಮುಚ್ಚಿದ್ದೀರಿ’ ಎಂದು ಅವರು ಆರೋಪಿಸಿದ್ದಾರೆ.ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಮಾತನಾಡಿ, ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನವೀಯ ನಡೆ ಅನುಸರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada