ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಹುದ್ದೆಯಿಂದ ರಾಜೇಶ್ವರ್ ಸಿಂಗ್ ಸ್ವಯಂ ನಿವೃತ್ತಿ ಪಡೆದುಕೊಂಡ ಮರುದಿನವೇ ಬಿಜೆಪಿ ಅವರನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಿಂದ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ.ಸೋಮವಾರವಷ್ಟೇ ಜಾರಿ ನಿರ್ದೇಶನಾಲಯ ಟ್ವೀಟ್ ಮಾಡಿ ಸಿಂಗ್ ಅವರ ಸ್ವಯಂ ನಿವೃತ್ತಿ ಮನವಿಯನ್ನು ಕೇಂದ್ರ ಸರಕಾರ ಒಪ್ಪಿದೆ ಎಂದು ಮಾಹಿತಿ ನೀಡಿತ್ತು. ಜಾರಿ ನಿರ್ದೇಶನಾಲಯದ ಸೇವೆಗೆ 2007ರಲ್ಲಿ ಸಿಂಗ್ ಸೇರಿದ್ದರು. ಅದಕ್ಕೂ ಮುಂಚೆ ಅವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದರು.”ಸಾರ್ವಜನಿಕ ಸೇವೆ ಸಲ್ಲಿಸಬೇಕು ಹಾಗೂ ದೇಶಕ್ಕೆ ಸಂಪೂರ್ಣವಾಗಿ ನನ್ನನ್ನು ಮುಡಿಪಾಗಿಡಬೇಕು ಎಂಬ ಬಯಕೆ ನನ್ನಲ್ಲಿ ಇತ್ತು, ರಾಜಕೀಯದಲ್ಲಿ ಇದನ್ನು ಸಾಧಿಸಬಹುದು ಎಂದು ನಾನು ನಂಬಿದ್ದೇನೆ” ಎಂದು ಸಿಂಗ್ ಸೋಮವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ತಮಗೆ ಟಿಕೆಟ್ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು “ಬಿಜೆಪಿಯ ಸಿದ್ಧಾಂತವು ಈ ದೇಶದ ಭವಿಷ್ಯವಾಗಿದೆ. ಯೋಗಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಹಾಗೂ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಅವರನ್ನು ನಾವು ಬೆಂಬಲಿಸಬೇಕು, ಹೆಚ್ಚುತ್ತಿರುವ ಕೋಮುವಾದವನ್ನು ನಿಯಂತ್ರಿಸಬೇಕು” ಎಂದಿದ್ದಾರೆ.ಮಂಗಳವಾರ ಟ್ವೀಟ್ ಕೂಡ ಮಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.”ನನ್ನ ಹೊಸ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಂತಾಗಲು ಶ್ರೀ ರಾಮನಿಗೆ ಪ್ರಾರ್ಥಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada