ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಫೈರಿಂಗ್ಗೆ ಯತ್ನ ವಿಚಾರ
ಬೆಳಗಾವಿ ಜಿಲ್ಲೆಯ ಬೈಲಹೊಂಗಲನಗರದ ನಿವಾಸಿಗಳಾದ ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್
ನಮ್ಮ ಸಹೋದರ ಮತ್ತು ಆತನ ಹೆಂಡತಿಯ ಅಕ್ಕನಮಗನಿಂದಲೇ ನನ್ನ ಮೇಲೆ ಐದು ಸುತ್ತು ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಅದೃಷ್ಟವಶಾತ್ ಬದುಕುಳಿದಿದ್ದೇನೆ ಎಂದು ಚಿತ್ರನಟ,ಉದ್ಯಮಿ ಶಿವರಂಜನ್ ಬೋಳಣ್ಣವರ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ್ಮೀಯ ಗುರುಹಿರಿಯರು ಹಾಗೂ ಸ್ನೇಹಿತರ ಆಶೀರ್ವಾದದಿಂದ ನಾನು ಬದುಕಿದ್ದೇನೆ. ನಿನ್ನೆ ಸಂಜೆ 7.30ರ ಸುಮಾರಿಗೆ ನನ್ನ ಮೇಲೆ ಸಂಬಂಧಿಕರರಿಂದಲೇ ಗುಂಡಿನ ದಾಳಿ ಆಗಿದೆ.
ನಮ್ಮ ಸಹೋದರ ಮತ್ತು ಆತನ ಹೆಂಡತಿ ಅಕ್ಕನ ಮಗ ಸೇರಿ ನನ್ನ ಮೇಲೆ ಐದು ಸುತ್ತು ಗುಂಡಿನ ದಾಳಿ ಮಾಡಿದ್ದಾರೆ. ಅದೃಷ್ಟವಶಾತ್ ನನಗೆ ಯಾವುದೇ ಗುಂಡು ತಗುಲಿಲ್ಲ.ಆದ್ರೆ ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಇದನ್ನ ನಾನು ಖಂಡಿಸುತ್ತೇನೆ.
ಘಟನೆ ನಡೆದ ಬಳಿಕ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗಿ ಕೆಲಸ ಮಾಡಿದೆ.ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಇವತ್ತು ಬಂಧಿಸುವ ಭರವಸೆಯನ್ನೂ ಪೊಲೀಸರು ನೀಡಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ.ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಚಿತ್ರನಟ,ಉದ್ಯಮಿ ಶಿವರಂಜನ್ ಬೋಳಣ್ಣವರ 90ರ ದಶಕದಲ್ಲಿ ಅಮೃತ ಸಿಂಧು, ರಾಜಾ ರಾಣಿ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರನಟಿ ಶೃತಿ ಅಭಿನಯದ ಅಮೃತಸಿಂಧು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದರು.
ನಟ, ಉದ್ಯಮಿ ಶಿವರಂಜನ್ ಬೋಳಣ್ಣವರ್ ಮೇಲೆ ಫೈರಿಂಗ್ಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಕಾರಣರಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದರು.ಸದ್ಯ ಓರ್ವ ಆರೋಪಿಯನ್ನ ಬಂಧಿಸಿರುವುದಾಗಿ ತಿಳಿದುಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: