ವಿಧಾನಸಭಾ ಚುನಾವಣೆಗೆ ಬಂಪರ್ ಬಜೆಟ್ ಹಿಡಿದು ಸಿಎಂ ಬೊಮ್ಮಾಯಿ ಅಖಾಡಕ್ಕೆ ರೆಡಿ ಆಗಿದ್ದಾರೆ. ಈ ಬಾರಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಮೇಲೆ ಅತೀ ಹೆಚ್ಚು ಒತ್ತು ನೀಡಿರುವ ಬೊಮ್ಮಾಯಿ, ಸರ್ವತೋಮುಖ ಅಭಿವೃದ್ಧಿಯ ಕನಸು ಬಿತ್ತಿದ್ದಾರೆ..
ಕಿತ್ತೂರು ಭಾಗದಲ್ಲಿ ಮತ ಭದ್ರಕ್ಕೆ ಕೈಹಾಕಿದ ಸಿಎಂ, ಕಲ್ಯಾಣದಲ್ಲಿ ಕೇಸರಿ ಕ್ರಾಂತಿಗೆ ಕಹಳೆ ಮೊಳಗಿಸಿದ್ದಾರೆ.
ಕಿತ್ತೂರು ಭಾಗಕ್ಕೂ ಸಿಕ್ತು ಭರ್ಜರಿ ಬಜೆಟ್ ಗಿಫ್ಟು
ಕಳೆದ ಬಾರಿ ಅಲ್ಪಮಟ್ಟಿಗೆ ಕೈಹಿಡಿದು ಕಾಂಗ್ರೆಸ್ ಪರ ನಿಂತಿದ್ದ ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಬಂಪರ್ ಫಸಲು ತೆಗೆಯುವ ಕಾಯಕಕ್ಕೆ ಬೊಮ್ಮಾಯಿ ಇಳಿದಂತಿದೆ. ನಿರೀಕ್ಷೆಯಂತೆ ಕಿತ್ತೂರು ಭಾಗಕ್ಕೂ ಅನುದಾನದ ಹೊಳೆ ಹರಿದಿದ್ದು, ಕಲ್ಯಾಣದಲ್ಲಿ ಈ ಬಾರಿ ಹಣದ ಮಳೆ ಸುರಿಸಿದ್ದಾರೆ ಸಿಎಂ ಬೊಮ್ಮಾಯಿ. ಕೃಷಿಯಿಂದ ಪ್ರವಾಸೋದ್ಯಮವರೆಗೂ ಕಲ್ಯಾಣ ಕರ್ನಾಟಕವನ್ನೇ ಗುರಿ ಆಗಿಸಿದ್ದಾರೆ.
ಕಲ್ಯಾಣ ಭಾಗಕ್ಕೆ ಕಾಂಚಾಣ!
ಟಾಪ್ 1 : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ನಿರ್ಧಾರ
ಟಾಪ್ 2 : ಕ.ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹5 ಸಾವಿರ ಕೋಟಿ ಕಾಮಗಾರಿ
ಟಾಪ್ 3 : ಬಳ್ಳಾರಿಯಲ್ಲಿ 2 ಲಕ್ಷ ಲೀ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
ಟಾಪ್ 4 : ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ಗಳ ಸ್ಥಾಪನೆ
ಟಾಪ್ 5 : ಯಾದಗಿರಿ, ಕಲಬುರ್ಗಿಯಲ್ಲಿ ಅಂತರ್ಜಲವನ್ನ ವೃದ್ಧಿಸಲು 443 ಕೋಟಿ ರೂ.
ಟಾಪ್ 6 : ನೆಟೆ ರೋಗದಿಂದ ಹಾನಿಯಾದ ತೊಗರಿ ಬೆಳೆ ಹೆಕ್ಟೆರ್ಗೆ ₹10 ಸಾವಿರ
ಟಾಪ್ 7 : ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ
ಟಾಪ್ 8 : ಕಲಬುರಗಿಯಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ
ಟಾಪ್ 9 : ಚಿತ್ತಾಪುರ, ಹುಮನಾಬಾದ್, ರಾಯಚೂರು ಗ್ರಾಂ. ಕೈಗಾರಿಕಾ ವಸಾಹತು ಸ್ಥಾಪನೆ
ಟಾಪ್ 10 : ಬೀದರ್-ಕಲಬುರ್ಗಿ-ಬಳ್ಳಾರಿ ಹೆದ್ದಾರಿ ₹7,650 ಕೋಟಿ ವೆಚ್ಚದಲ್ಲಿ ಚತುಷ್ಪಥ
ಟಾಪ್ 11 : ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ-ಆಂಧ್ರ ಗಡಿ ಹೆದ್ದಾರಿಗೆ ₹2,200 ಕೋಟಿ
ಟಾಪ್ 12 : ರಾಯಚೂರು, ಕಲಬುರ್ಗಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್
ಇದಷ್ಟೇ ಅಲ್ಲ, ಯಾದಗಿರಿ, ರಾಯಚೂರು ಜಿಲ್ಲೆಗಳು, ಹರಪನಹಳ್ಳಿಯ ಕೆರೆಗಳನ್ನು ತುಂಬಿಸುವ ಯೋಜನೆ ನೀಡಲಾಗಿದೆ. ಯಾದಗಿರಿಯ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ.. ಗದಗ-ವಾಡಿ ರೈಲು ಮಾರ್ಗಕ್ಕೆ 200 ಕೋಟಿ, ಮುನಿರಾಬಾದ್-ರಾಯಚೂರು ರೈಲುಮಾರ್ಗ 150 ಕೋಟಿ, ಮಂಗಳೂರು-ಕಲಬುರ್ಗಿಯಲ್ಲಿ 30 ಕೋಟಿ ವೆಚ್ಛದಲ್ಲಿ ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆ ಸ್ಥಾಪನೆ ಆಗಲಿದೆ. ಸೇಡಂನ ಮಳಖೇಡ ಕೋಟೆ ಸಂರಕ್ಷಣೆ ಕಾಮಗಾರಿಗೆ 20 ಕೋಟಿ ಅನುದಾನ ನೀಡಲಾಗಿದೆ.. ಇನ್ನು, ಕಿತ್ತೂರು ಭಾಗಕ್ಕೂ ಬೊಮ್ಮಾಯಿ ಗಿಫ್ಟ್ ನೀಡಿದ್ದಾರೆ.
ಕಿತ್ತೂರು ಭಾಗಕ್ಕೆ ಸಿಕ್ಕಿದ್ದೇನು?
ಟಾಪ್ 1 : ಕಿತ್ತೂರು ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮಂಡಳಿ ಸ್ಥಾಪನೆ
ಟಾಪ್ 2 : ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ ₹ 5 ಸಾವಿರ ಕೋಟಿ ಅನುದಾನ
ಟಾಪ್ 3 : ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ₹1 ಸಾವಿರ ಕೋಟಿ
ಟಾಪ್ 4 : ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
ಟಾಪ್ 5 : ಹುಬ್ಬಳ್ಳಿ-ಧಾರವಾಡ 6 ಪಥಗಳ ಹೆದ್ದಾರಿಗೆ 1,200 ಕೋಟಿ ಘೋಷಣೆ
ಟಾಪ್ 6 : ಹಾವೇರಿಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಕೇಂದ್ರ ಸ್ಥಾಪನೆ
ಟಾಪ್ 7 : ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪನೆ
ಒಟ್ಟಾರೆ, ಸಿಎಂ ಬೊಮ್ಮಾಯಿ ತಮ್ಮ 2ನೇ ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಬಜೆಟ್ ಮೂಲಕ ಅನುದಾನದ ತಾರತಮ್ಯ ಹೋಗಲಾಡಿಸಲು ಯತ್ನಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada