ಬೆಂಗಳೂರು: ಪಕ್ಷವನ್ನು ಸಮರ್ಥಿಸಿಕೊಳ್ಳಲು ವಕ್ತಾರರ ಹುಡುಕಾಟದಲ್ಲಿರುವ ಯುವ ಕಾಂಗ್ರೆಸ್ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಐಫೋನ್ ಮೊಬೈಲ್ ಬಹುಮಾನ ಕೊಡುವುದಾಗಿ ಘೋಷಿಸಿದೆ. ಜತೆಗೆ ವಕ್ತಾರನ್ನಾಗಿ ಮಾಡುವುದಾಗಿಯೂ ಹೇಳಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ, ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಅವರು ಭಾಷಣ ಸ್ಪರ್ಧೆಯ ಮಾಹಿತಿಯನ್ನು ಪ್ರಕಟಿಸಿದರು.
ರಾಜ್ಯದ ಯುವಕರು ತಮ್ಮ ಮಾತುಗಳು, ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಇಲ್ಲವಾಗಿದೆ. ಹೀಗಾಗಿ ನಾವು ಆ ವೇದಿಕೆಯನ್ನು ನೀಡುತ್ತಿದ್ದೇವೆ. ಕಾಂಗ್ರೆಸ್ ವಿಚಾರವನ್ನು ಜನರಿಗೆ ಮುಟ್ಟಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಬೇರೆ ಪಕ್ಷಗಳಲ್ಲಿ ವಕ್ತಾರರ ಕೆಲಸ ಎಂದರೆ ಸುಳ್ಳನ್ನೇ ನಿಜ ಮಾಡುವುದು. ಅವರಿಗೆ ವಾಟ್ಸ್ಆಯಪ್, ಫೇಸ್ಬುಕ್ನಲ್ಲಿ ಬರುವ ಸುಳ್ಳನ್ನು ನಿಜ ಮಾಡುವ ಕೆಲಸ ಮಾಡುತ್ತಾರೆ. ನಮ್ಮ ವೇದಿಕೆಯಲ್ಲಿ ಅವರ ಅಭಿಪ್ರಾಯ, ಜ್ಞಾನವನ್ನು ಪ್ರಸ್ತುತ ಪಡಿಸಲು ಅವಕಾಶ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಗೆದ್ದವರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಬಿ.ವಿ. ಶ್ರೀನಿವಾಸ್ ಹೇಳಿದರು.
ಸ್ಪರ್ಧೆ ಕುರಿತು ಮಾಹಿತಿ ನೀಡಿದ ನಲಪಾಡ್, ಮೊದಲು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುವುದು. ಅಲ್ಲಿ ಆಯ್ಕೆಯಾದ ಪ್ರಮುಖ ಅಭ್ಯರ್ಥಿಗಳಿಗೆ ಜೂನ್ 18ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಂತಿಮ ಸ್ಪರ್ಧೆ ನಡೆಸಲಾಗುವುದು. ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿಜೇತರಾಗುವವರಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನ ಐ ಫೋನ್ 13 ಪ್ರೋ, ಎರಡನೇ ಬಹುಮಾನವಾಗಿ ಐ ಫೋನ್ 13 ಹಾಗೂ ಮೂರನೇ ಬಹುಮಾನವಾಗಿ ಒನ್ ಪ್ಲಸ್ ಫೋನ್ ಅನ್ನು ನೀಡಲಾಗುವುದು. ಜತೆಗೆ ಉತ್ತಮ ಭಾಷಣ ಮಾಡುವ 10 ಮಂದಿಯನ್ನು ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರುನ್ನು ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ಆಯ್ಕೆ ಮಾಡಲಾಗುವುದು ಎಂದರು.
ಕೃಷ್ಣ ಮಾತನಾಡಿ, ಯುವಕರು ನಿರುದ್ಯೋಗ, ಹಣದುಬ್ಬರ, ಭದ್ರತೆ, ಮಹಿಳಾ ವಿಚಾರ, ರೈತರ ವಿಚಾರ, ವ್ಯಪಾರದ ವಿಚಾರಗಳಲ್ಲಿ ಯುವಕರು ತಮ್ಮ ಧ್ವನಿ ಎತ್ತಿ ಸರ್ಕಾರವನ್ನು ಪ್ರಶ್ನಿಸುವಂತಾಗಬೇಕು. ಎಂಟು ವರ್ಷಗಳಾದರೂ ನಿರುದ್ಯೋಗ ದಾಖಲೆ ಪ್ರಮಾಣದ ಏರಿಕೆಯಾಗಿರುವುದು ಏಕೆ? ಎಂದು ಪ್ರಧಾನ ಮಂತ್ರಿಗಳಿಗೆ ಪ್ರಶ್ನೆ ಮಾಡುವಂತಾಗಬೇಕು ಎಂದರು.
ಯುವ ಕಾಂಗ್ರೆಸ್ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ, ದೀಪಿಕಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಚೈತ್ರಾ, ಮಾರುತಿ, ಎಐಸಿಸಿ ವಕ್ತಾರರಾದ ಐಶ್ವರ್ಯ ಮಹದೇವ್, ಪ್ರಧಾನ ಕಾರ್ಯದರ್ಶಿ ಆಶಿಕ್ ಗೌಡ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada