ಬೆಂಗಳೂರು ಡಿ. 25: ಕೊರೊನಾ ನಿಯಮ ಉಲ್ಲಂಘನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವಲ್ಲಿ ಕರ್ನಾಟಕ ಪೊಲೀಸರು ದಾಖಲೆ ಸೃಷ್ಟಿಸಿದ್ದಾರೆ. ಅದರಲ್ಲೂ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ದಂಡ ವಸೂಲಿಯನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಸಂಚಾರ ನಿಯಮ ಹಾಗೂ ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಬಡಪಾಯಿ ಜನರಿಂದ ರಾಜ್ಯದಲ್ಲಿ 263 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
ದಂಡ ವಸೂಲಿ ಕಾಯಕ
ಸಂಚಾರ ನಿಯಮ ಉಲ್ಲಂಘನೆ ಹಾಗೂ ಕೊರೊನಾ ನಿಯಮ ಉಲ್ಲಂಘನೆ ಸಂಬಂಧ ಪಟ್ಟಂತೆ ಕರ್ನಾಟಕ ಪೊಲೀಸರು ನವೆಂಬರ್ ಅಂತ್ಯಕ್ಕೆ 262 ಕೋಟಿ ರೂ. ದಂಡವನ್ನು ಸಂಗ್ರಹ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಾಹನ ಸವಾರರಿಂದ 233 ಕೋಟಿ ರೂ. ದಂಡ ವಸೂಲಿ ಮಾಡಿದರೆ, ಮಾಸ್ಕ್ ಧರಿಸಿಲ್ಲ, ಸಾರ್ವಜನಿಕ ಅಂತರ ಪಾಲಿಸದ ಕೊರೊನಾ ನಿಯಮ ಉಲ್ಲಂಘನೆ ಮಾಡಿದವರಿಂದ 28.21 ಕೋಟಿ ರೂ. ವಸೂಲಿ ಮಾಡಿದ್ದಾರೆ. ಕಳೆದ ವರ್ಷದ ದಂಡ 195 ಕೋಟಿ ರೂ. ದಂಡ ವಸೂಲಿ ಮಾಡಿದ್ದರು. ಈ ಬಾರಿ ಹೆಚ್ಚುವರಿಯಾಗಿ 67 ಕೋಟಿ ರೂ. ವಸೂಲಿ ಮಾಡಿದ್ದಾರೆ.
ಬೆಂಗಳೂರು ಪೊಲೀಸರ ದಂಡ ಲೆಕ್ಕಾಚಾರ
ಅದರಲ್ಲೂ ಸಂಚಾರ ನಿಯಮ ಉಲ್ಲಂಘನೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಸಂಬಂಧ ಬೆಂಗಳೂರು ಪೊಲೀಸರೇ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 122 ಕೋಟಿ ರೂ. ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಗೆ 91 ಕೋಟಿ ರೂ. ವಸೂಲಿ ಮಾಡಿದ್ದರು. ಈ ಬಾರಿ ಹೆಚ್ಚುವರಿ 32 ಕೋಟಿ ರೂ. ವಸೂಲಿ ಮಾಡಿ ಕಳೆದ ವರ್ಷದ ದಾಖಲೆಯನ್ನು ಮುರಿದಿದ್ದಾರೆ.
ಪಕ್ಕಾ ಲೆಕ್ಕ ಇದು
ಅನಧಿಕೃತ ಅದೆಷ್ಟೋ?: ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಕೊರೊನಾ ನಿಯಮ ಉಲ್ಲಂಘನೆ ದಂಡ ವಸೂಲಿ ಹೆಸರಿನಲ್ಲಿ ರಶೀದಿ ಹರಿಯದೇ ಅನಧಿಕೃತವಾಗಿ ಸಂಗ್ರಹ ಮಾಡುತ್ತಾರೆ ಎಂಬ ಆರೋಪವಿದೆ. ಅದರಲ್ಲೂ ಬೆಂಗಳೂರಿನಲ್ಲಿ ಟೋಯಿಂಗ್ ಮಾಡುವ ವಾಹನಗಳಲ್ಲಿ ಶೇ. 50 ಕ್ಕಿಂತಲೂ ಹೆಚ್ಚು ವಾಹನಗಳನ್ನು ದಂಡದ ಅರ್ಧ ಮೊತ್ತ ಪಡೆದೇ ಬಿಡುಗಡೆ ಮಾಡುವ ಅರೋಪವಿದೆ. ಟೋಯಿಂಗ್ ವಿಚಾರದಲ್ಲಿ ಪೊಲೀಸರು ವಸೂಲಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಒಂದು ವಾಹನ ಟೋಯೀಂಗ್ ಮಾಡಿದರೆ 1600 ರೂ. ಕಾನೂನು ಬದ್ಧವಾಗಿ ದಂಡ ಕಟ್ಟುವ ಬದಲಿಗೆ ಪೊಲೀಸರನ್ನು ಬೇಡಿಕೊಂಡು ಅರ್ಧ ಹಣ ಪಾವತಿಸಿ ವಾಹನ ಬಿಡಿಸಿಕೊಳ್ಳುವರ ಸಂಖ್ಯೆ ಜಾಸ್ತಿಯಿದೆ. ಆ ದಂಡ ಲೆಕ್ಕಕ್ಕೆ ಸಿಗುವುದೇ ಇಲ್ಲ. ಅದೆಲ್ಲವನ್ನು ಪರಿಗಣಿಸಿದರೆ ದಂಡದ ಮೊತ್ತ ದುಪ್ಪಟ್ಟು ಆಗುವುದರಲ್ಲಿ ಅನುಮಾನವೇ ಇಲ್ಲ. ಎಷ್ಟೇ ಪಾರದರ್ಶಕ ನಿಯಮಗಳನ್ನು ಜಾರಿಗೆ ತಂದರೂ ಸಂಚಾರ ಪೊಲೀಸರು ಟೋಯಿಂಗ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಾಹನ ಬಿಡುಗಡೆ ಮಾಡುವ ಕಾಯಕ ಬಿಟ್ಟಿಲ್ಲ.
ದಂಡ ವಸೂಲಿ ಪರಿಹಾರವೇ ?
ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುವ ವಾಹನ ಸವಾರರಿಗೆ ದಂಡ ವಿಧಿಸಿ ಸಂಚಾರ ವ್ಯವಸ್ಥೆ ಸರಿಪಡಿಸುವ ಉದ್ದೇಶ ಸರಿಯಿದೆ. ಆದರೆ ಅದರ ಕಾರ್ಯಗತ ವಿಚಾರ ಬಂದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ಕಾನೂನು ಬದ್ಧ ದಂಡ ವಸೂಲಿಗಿಂತಲೂ ಅವ್ಯವಹಾರದ ವಾಸನೆಯೇ ಜಾಸ್ತಿ. ಇತ್ತೀಚೆಗೆ ಜಯನಗರದಲ್ಲಿ ಟೋಯಿಂಗ್ ವಾಹನ ಬಿಡುಗಡೆ ಮಾಡಲು ದಂಡದ ಅರ್ಧ ಮೊತ್ತ ಪಡೆದು ಬಿಡುಗಡೆ ಮಾಡಿದ ಟೋಯಿಂಗ್ ವಾಹನ ಸಿಬ್ಬಂದಿಯನ್ನು ಎಸಿಬಿ ಪೊಲೀಸರು ಬಂಧಿಸಿದ್ದರು.
ದಂಡದ ವಿಚಾರಕ್ಕೆ ಬಂದರೆ ಟೋಯಿಂಗ್ ಹೆಸರಿನಲ್ಲಿ ಸಂಚಾರ ಪೊಲೀಸರು ನಡೆದುಕೊಳ್ಳುವ ರೀತಿಗೆ ಸಾರ್ವಜನಿಕರ ಅಸಹನೆ ದೊಟ್ಟ ಮಟ್ಟದಲ್ಲಿ ಹೊರ ಬೀಳುತ್ತಿದೆ. ಪದೇ ಪದೇ ಟೋಯಿಂಗ್ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಟೋಯಿಂಗ್ ಸಿಬ್ಬಂದಿಯನ್ನು ಹಲ್ಲೆ ಮಾಡಿದ್ದಾರೆ. ಇನ್ನು ನಿಜವಾಗಿಯೂ ಸಂಚಾರ ನಿಯಮ ಪಾಲನೆ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಜವಾದ ಉದ್ದೇಶವೇ ಹೊಂದಿದ್ದಲ್ಲಿ ಪೊಲೀಸರು ದಂಡದಿಂದ ನಿಯಂತ್ರಣ ಅಸಾಧ್ಯ ಎಂಬಂತಹ ಪರಿಸ್ಥಿತಿಯಿದೆ. ಹೀಗಾಗಿಯೇ ದಂಡ ವಸೂಲಿ ಕೂಡ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: