ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸುವ ರೀತಿ ಭಿನ್ನ-ಭಿನ್ನ. ಕೆಲವರು ಹಚ್ಚೆ ಹಾಕಿಸಿಕೊಳ್ಳುತ್ತಾರೆ, ಕೆಲವರು ಗಾಡಿಗಳ ಮೇಲೆ ಹೆಸರು ಹಾಕಿಸುತ್ತಾರೆ. ದೂರ-ದೂರಿಂದ ಮೆಚ್ಚಿನ ನಟನ ನೋಡಲು ಬರುತ್ತಾರೆ. ಇನ್ನು ಕೆಲವರು ಮೌನವಾಗಿ ಮನದಲ್ಲಿಯೇ ನಟನನ್ನು ಆರಾಧಿಸುತ್ತಾರೆ.
ಕೆಲವರು ತಮ್ಮ ಮೆಚ್ಚಿನ ನಟರ ಆರೋಗ್ಯ, ಅಭಿವೃದ್ಧಿಗಾಗಿ ದೇವರ ಮೊರೆ ಹೋಗುತ್ತಾರೆ. ಅಂಥಹುದೇ ಒಂದು ಅಭಿಮಾನದ ಉದಾಹರಣೆ ಇಲ್ಲಿದೆ.
ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯದವು ಒಂದಾಗಿದೆ. ದೇವರ ಉತ್ಸವ ಹಾಗೂ ಕಲೆಯಲ್ಲಿ ಶ್ರೀಮಂತಿಕೆ ಹೊಂದಿರುವ ಈ ಸಮುದಾಯವು ಮದ್ಯ ಕರ್ನಾಟಕದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.
ಅಂದಹಾಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಗ್ರಾಮದ ಶ್ರೀ ಬಾಲಕೃಷ್ಣ ಸ್ವಾಮಿ ಹಾಗೂ ಶ್ರೀ ರಂಗನಾಥ ಸ್ವಾಮಿಯ ದೇವರಿಗೆ ಕುರಿ ಕರೆಯುವ ಮೂಲಕ ಏಕಾದಶಿ ಹಬ್ಬ ಬಹಳ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಕುರಿಗಾಹಿ ಯುವಕರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಾಗಿದ್ದು, ಕುರಿಗಾಹಿಗಳು ತನ್ನ ಇಷ್ಟದ ಕುರಿಗಳ ಮೇಲೆ ಡಿ.ಬಾಸ್, ಕಾಂತ್ರಿ, ದರ್ಶನ್ ಈಗೆ ಹೆಸರು ಬರೆದು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಿದ ವಿಶೇಷ ದೃಶ್ಯ ಕಂಡು ಬಂದಿತು. ಕುರಿಗಳಿಗೆ ಯಾವುದೇ ರೋಗ ರುಜಿನಗಳು ಬರಬಾರದು ಎಂದು ಪ್ರತಿ ವರ್ಷ ದೇವರಿಗೆ ಪ್ರದಕ್ಷಿಣೆ ಹಾಕಿಸುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಇದು ಮಾತ್ರವೇ ಅಲ್ಲದೆ ಹಲವು ಕಡೆಗಳಲ್ಲಿ ಜಾತ್ರೆಗಳಲ್ಲಿ ದರ್ಶನ್ ಹೆಸರು ಬರೆದು ಬಾಳೆಹಣ್ಣು ಎಸೆಯುವುದು, ದರ್ಶನ್ ಹೆಸರಲ್ಲಿ ವಿಶೇಷಾಭಿಷೇಕ, ದರ್ಶನ್ರ ದೊಡ್ಡ-ದೊಡ್ಡ ಕಟೌಟ್ ನಿಲ್ಲಿಸುವುದು ಮಾಡುತ್ತಲೇ ಬಂದಿದ್ದಾರೆ ಅವರ ಅಭಿಮಾನಿಗಳು. ಇದೀಗ ದರ್ಶನ್ರ ಹೊಸ ಸಿನಿಮಾ ‘ಕ್ರಾಂತಿ’ ತೆರೆಗೆ ಬರುತ್ತಿದ್ದು, ಅದರ ಬೆನ್ನಲ್ಲೆ ದರ್ಶನ್ ಅಭಿಮಾನಿಗಳು ಇನ್ನಷ್ಟು ಉತ್ಸಾಹಭರಿತರಾಗಿದ್ದಾರೆ.
ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯಲ್ಲಿ ಗಂಗಾಪೂಜೆಯೊಂದಿಗೆ ಆರಂಭಗೊಂಡ ಏಕಾದಶಿ ಹಬ್ಬ, ದೇವರಿಗೆ ವಿಶೇಷ, ಪುಷ್ಪಾಲಂಕಾರ, ದೊಡ್ಡಪೂಜೆ ಕಂಬದ ಪೂಜೆ ಹಾಗೂ ದೊಡ್ಡೆಡೆ ಸಲ್ಲಿಸಿದ ಬಳಿಕ ಮರುದಿನ ಕುರಿ ಕರೆಯುವ ಉತ್ಸವ ನಡೆಯಿತು.ಹಲವು ಇಷ್ಟಾರ್ಥ ಈಡೇರಿಸುವ ದೇವರು
ಕಷ್ಟ, ಸುಖ, ಆರೋಗ್ಯ, ಮಕ್ಕಳ ಫಲ, ಗ್ರಾಮದಲ್ಲಿ ಮಳೆ ಬೆಳೆ ಈಗೆ ಹತ್ತಾರು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮದ ಮಹಿಳೆಯರು ಹಾಗೂ ಪುರುಷರು ದೊಡ್ಡ ಪೂಜೆಯಂದು ಉಪವಾಸ ರಥ ಕೈಗೊಂಡು ರಾತ್ರಿ ತಣ್ಣೀರಿನಲ್ಲಿ ಸ್ನಾನ ಮಾಡಿ ದೇವರಿಗೆ ಉರುಳು ಸೇವೆ ಸಲ್ಲಿಸಿ ನಂತರ ತಂಬಿಟ್ಟಿನ ಆರತಿ ಬೆಳಗುವ ಮೂಲಕ ಹರಕೆ ತಿರಿಸುವ ವಿಶೇಷ ಸಂಪ್ರದಾಯ ಗ್ರಾಮದಲ್ಲಿದೆ.ವಿಶಿಷ್ಟ ಆಚರಣೆ
ಇನ್ನು ದೊಡ್ಡದಾದ ಹರಿವಾಣ ತಟ್ಟೆಯಲ್ಲಿ ಬಾಳೆ ಎಲೆ ಹಾಕಿ ಅದರಲ್ಲಿ ಪಾಯಸ, ಅನ್ನ, ಸಾಂಬಾರ್ ಹಾಗೂ ಬಾಳೆ ಹಣ್ಣು ಹಾಕಿ ದೊಡ್ಡೆಡೆ (ದೃಷ್ಟಿ ಕಂಬದ ಎಡೆ) ಸಿದ್ಧಪಡಿಸಲಾಗುವುದು. ಇನ್ನು ಉಪವಾಸ ರಥ ಕೈಗೊಂಡಿದ್ದ ಯುವಕರು ಅರೆ ಬೆತ್ತಲೆಯಲ್ಲಿ ಯಾರಿಗೂ ಕಾಣದಂತೆ ಕರಿಯ ಕಂಬಳಿ ಮಾರೆಮಾಡಿಕೊಂಡು ದೊಡ್ಡೆಡೆ ಸವಿದ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯುತ್ತದೆ.ಹಲವು ಹಳ್ಳಿಯ ಜನರು ಭಾಗಿ
ಇನ್ನು ದೇವರನ್ನು ಕುದುರೆ ಪಲ್ಲಕ್ಕಿ ಉತ್ಸವದಲ್ಲಿ ಕೂರಿಸಿ ಊರಿನ ಹೊರ ಭಾಗದಲ್ಲಿ ಕಲ್ಲಿನ ಕಂಬದ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ನಂತರ ತಂಡ ತಂಡವಾಗಿ ಸುಮಾರು ಸಾವಿರಕ್ಕೂ ಹೆಚ್ಚು ಕುರಿಗಳನ್ನು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಇನ್ನು ದೇವರಿಗೆ ಕುರಿ ಕರೆಯುವಾಗ ನೆರೆದಿದ್ದ ಭಕ್ತರು ಶಿಳ್ಳೆ ಕೇಕೆ, ಚಪ್ಪಾಳೆ ತಟ್ಟಿ ಕುರಿಗಳನ್ನು ಉರಿದುಂಬಿಸುವರು. ಹೊಸದುರ್ಗ ತಾಲೂಕಿನ ಗೊಲ್ಲರಹಳ್ಳಿ, ಹೊಳಲ್ಕೆರೆ, ಚಿತ್ರದುರ್ಗ ಹಾಗೂ ಬೆಂಗಳೂರು ಸೇರಿದಂತೆ ಸುತ್ತಲಿನ ಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ದೇವರ ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ.ಕಾಡುಗೊಲ್ಲರ ಜಾತ್ರೆ
ಒಟ್ಟಾರೆಯಾಗಿ ಬುಡಕಟ್ಟು ಕಾಡುಗೊಲ್ಲರು ಜಾತ್ರೆ ಹಾಗೂ ದೇವರ ಉತ್ಸವ ಮಾಡುವುದರಲ್ಲಿ ವಿಶಿಷ್ಟತೆಯನ್ನು ಹೊಂದಿದ್ದಾರೆ. ಅದರಲ್ಲೂ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ, ಬ್ಯಾಡರಹಳ್ಳಿ, ಹೊಸಹಟ್ಟಿ, ದಿಂಡವಾರ, ಈಶ್ವರಗೆರೆ ಗೊಲ್ಲರಹಟ್ಟಿ, ಉಪ್ಪಾರಹಳ್ಳಿ ಸೇರಿದಂತೆ ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮ ಸೇರಿದಂತೆ ಜಿಲ್ಲೆಯ ಮತ್ತಿತರ ಭಾಗಗಳಲ್ಲಿ ಏಕಾದಶಿ ಹಬ್ಬವನ್ನು ಪ್ರತಿವರ್ಷ ಆಚರಿಸುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: