ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾಗಿದ್ದ ಡಿ.ಬಿ ಇನಾಮದಾರ್ ಧಣಿ ಇಂದು ಮೃತಪಟ್ಟಿದ್ದಾರೆ.
ಬೆಳಗಾವಿ ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು ಆದ ಡಿ.ಬಿ ಇನಾಮದಾರ್ ಅವರು ಇಂದು ನಿಧರಾಗಿದ್ದಾರೆ . ನ್ಯುಮೋನಿಯಾ, ಲಂಗ್ಸ್ ಇಂಫೆಕ್ಷನ್ನಿಂದ ಬಳಲುತ್ತಿದ್ದ 74 ವರ್ಷದ ಇನಾಮದಾರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಡಿ.ಬಿ ಇನಾಮದಾರ್ ಅವರ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ವಗ್ರಾಮ ನೇಗಿನಹಾಳ ಸೇರಿ ಚನ್ನಮ್ಮ ಕಿತ್ತೂರು ಕ್ಷೇತ್ರದಲ್ಲಿ ದುಃಖ ಮಡುಗಟ್ಟಿದೆ.
ಸರಳ ಸಜ್ಜನಿಕೆ, ದಕ್ಷ ಆಡಳಿತದಿಂದ ಗುರುತಿಸಿಕೊಂಡಿದ್ದ ಡಿ.ಬಿ ಇನಾಮದಾರ್ ಅವರು ಅಪರೂಪದ ರಾಜಕಾರಣಿ. ಎಲ್ಲರೂ ಪ್ರೀತಿಯಿಂದ ಅವರನ್ನು ಧಣಿ ಎಂದು ಕರೆಯುತ್ತಿದ್ದರು. 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಶಾಸರಾಗಿ ಆಯ್ಕೆಯಾಗಿದ್ದ ಡಿ.ಬಿ ಇನಾಮದಾರ್, ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 1994 ಮತ್ತು 1999ರಲ್ಲಿ ಗೆದ್ದಿದ್ದರು. 2013ರಲ್ಲಿ ಮತ್ತೆ ಡಿಬಿ ಇನಾಮದಾರ ಶಾಸಕರಾಗಿದ್ದರು.
ಜನತಾ ಪಕ್ಷದಿಂದ 2 ಬಾರಿ ಮತ್ತು ಕಾಂಗ್ರೆಸ್ ನಿಂದ 3 ಬಾರಿ ಹೀಗೆ ಒಟ್ಟು ಐದು ಬಾರಿ ಗೆದ್ದಿದ್ದ ಡಿಬಿ ಇನಾಮದಾರ್ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದರು. ಅದೇ ರೀತಿ ಎಸ್ಎಂ ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಒಟ್ಟು 10 ಬಾರಿ ಚುನಾವಣೆ ಎದುರಿಸಿದ್ದ ಧಣಿಗಳು, ಐದು ಬಾರಿ ಗೆದ್ದು, ನಾಲ್ಕು ಬಾರಿ ಪರಾಭವಗೊಂಡಿದ್ದರು. ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಡಿಬಿ ಇನಾಮದಾರ್ ಅವರ ಅಗಲಿಕೆಯಿಂದ ಆದರ್ಶ, ಹಿರಿಯ ರಾಜಕೀಯ ಕೊಂಡಿಯೊಂದು ಕಳಚಿದಂತಾಗಿದೆ.
https://play.google.com/store/apps/details?id=com.speed.newskannada
Please follow and like us: