ಕಡೂರು: ತವರಿಂದ ಗಂಡನ ಮನೆಗೆ ಹೊರಟ ಮಹಿಳೆ ಯಗಟಿಪುರದ ಚೆಕ್ಡ್ಯಾಂ ಬಳಿ ವೇದಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಶವ ಸಿಕ್ಕ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿ ಮತ್ತು ಧರ್ಮಸ್ಥಳದ ಪ್ರಸಾದದ ಬ್ಯಾಗಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಒಂದು ದಿನದ ಅಂತರದಲ್ಲಿ ಪರಪುರಷನ ಶವದ ಜತೆಗೆ ಭಯಾನಕ ರಹಸ್ಯ ಬಯಲಾಗಿದೆ.ಬೆಂಗಳೂರಿನ ಕರಿಓಬನಹಳ್ಳಿ ನಿವಾಸಿ ಕೆ.ಎಂ.ಲೋಕೇಶ್ ಎಂಬುವರ ಪತ್ನಿ ಲತಾ(36) ಮತ್ತು ಲೋಕೇಶ್ ಜತೆ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀಕಾಂತ್(31) ಮೃತರು. ಲೋಕೇಶ್ ಮತ್ತು ಲತಾ 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 13 ವರ್ಷದ ಮಗಳಿದ್ದಾಳೆ. ಲೋಕೇಶ್ ಪ್ಲಂಬಿಂಗ್ ಗುತ್ತಿಗೆದಾರನಾಗಿದ್ದು, ಇವರ ಜತೆ ಲಕ್ಷ್ಮೀಕಾಂತ್ ಕೆಲಸ ಮಾಡುತ್ತಿದ್ದ. ಅಲ್ಲದೆ ಲೋಕೇಶ್ ಮನೆಯಲ್ಲೇ 4 ವರ್ಷದಿಂದ ಲಕ್ಷ್ಮೀಕಾಂತ್ ವಾಸವಿದ್ದ.ಕೆಲಸದ ಜತೆಗೆ ಆಶ್ರಯಕೊಟ್ಟ ಮಾಲೀಕನ ಪತ್ನಿ ಜತೆ ಸಲುಗೆ ಬೆಳೆಸಿಕೊಂಡ ಲಕ್ಷ್ಮೀಕಾಂತ್, ಅಕ್ರಮ ಸಂಬಂಧಕ್ಕೂ ದಾರಿ ಮಾಡಿಕೊಂಡಿದ್ದ. ಇತ್ತೀಚಿಗೆ ಇವರಿಬ್ಬರ ಅಕ್ರಮ ಸಂಬಂಧ ಲೋಕೇಶ್ಗೆ ತಿಳಿದಿದ್ದು, ಮನಯಲ್ಲಿ ಜಗಳವಾಗಿತ್ತು. ನಂತರ ತವರು ಮನೆ ಭಾಗಮಂಡಲಕ್ಕೆ ಲತಾ ಜ.28ರಂದು ತೆರಳಿದ್ದಳು. ಮನೆಯಲ್ಲಿ ನಡೆದ ಘಟನೆ ಬಗ್ಗೆ ಪ್ರಿಯಕರ ಲಕ್ಷ್ಮೀಕಾಂತ್ಗೆ ಫೋನ್ನಲ್ಲಿ ತಿಳಿಸಿದ್ದಳು.ಲತಾ ಫೆ.7ರಂದು ವಾಪಸ್ ಗಂಡನ ಮನೆಗೆ ಹೋಗುತ್ತೇನೆಂದು ತವರು ಮನೆಯಿಂದ ಹೊರಟವಳು ಬೆಂಗಳೂರಿಗೆ ಹೋಗದೆ ಧರ್ಮಸ್ಥಳಕ್ಕೆ ತೆರಳಿದ್ದು, ಅಲ್ಲಿ ಲಕ್ಷ್ಮೀಕಾಂತ್ ಭೇಟಿಯಾಗಿದ್ದಾನೆ. ಇಬ್ಬರೂ ದೇವರ ದರ್ಶನ ಪಡೆದು ಕಡೂರು ಮಾರ್ಗವಾಗಿ ಬೆಲಗೂರಿಗೆ ಹೊರಟ್ಟಿದ್ದರು. ಆದರೆ ಇಬ್ಬರೂ ಹೆದರಿ ಫೆ.8ರ ರಾತ್ರಿ ಯಗಟಿಪುರದ ಬಳಿಯ ವೇದಾ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆ.9ರಂದು ಲತಾಳ ಶವ ನದಿ ನೀರಲ್ಲಿ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಗಮನಿಸಿ ಯಗಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪಿಎಸ್ಐ ಶಶಿಕುಮಾರ್ ಮತ್ತು ಸಿಬ್ಬಂದಿ ಶವ ತೆಗೆದರು. ಆ ಸ್ಥಳದಲ್ಲೇ ಪುರುಷನ ಪಾದರಕ್ಷೆ ಮತ್ತು ಧರ್ಮಸ್ಥಳದ ಪ್ರಸಾದ ಬ್ಯಾಗ್ಗಳು ಪತ್ತೆಯಾಗಿದ್ದವು. ಹಾಗಾಗಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ ಪೊಲೀಸರು ಬುಧವಾರವೇ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಯಿಸಿದರೂ ಮತ್ತೊಂದು ಶವ ಪತ್ತೆಯಾಗಿರಲಿಲ್ಲ. ಇದು ಮತ್ತಷ್ಟು ಅನುಮಾನ ಹುಟ್ಟುಹಾಕಿತ್ತು.ಕೊನೆಗೆ ಮಲ್ಪೆಯ ತಜ್ಞ ಈಜುಗಾರರನ್ನು ಕರೆಸಿ ಗುರುವಾರ ಪರಿಶೀಲಿಸಿದಾಗ ನೀರಿನಡಿಯ ರಾಡ್ಗೆ ಸಿಲುಕಿದ್ದ ಲಕ್ಷ್ಮೀಕಾಂತ್ನ ಶವ ಪತ್ತೆಯಾಗಿದೆ. ಶವ ರಾಡ್ಗೆ ಸಿಕ್ಕಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಗೋಚರಿಸಿರಲಿಲ್ಲ. ಎರಡೂ ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada